ADVERTISEMENT

ಮತಾಂತರಕ್ಕೆ ಪ್ರಚೋದನೆ‌ ಪ್ರಕರಣ: ಸಿದ್ದರಾಮಯ್ಯರನ್ನು ಭೇಟಿಯಾದ ಕ್ರಿಶ್ಚಿಯನ್ನರು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 7:58 IST
Last Updated 18 ಅಕ್ಟೋಬರ್ 2021, 7:58 IST
ಸಿದ್ದರಾಮಯ್ಯರನ್ನು ಭೇಟಿಯಾದ ಕ್ರಿಶ್ಚಿಯನ್ನರು
ಸಿದ್ದರಾಮಯ್ಯರನ್ನು ಭೇಟಿಯಾದ ಕ್ರಿಶ್ಚಿಯನ್ನರು   

ಹುಬ್ಬಳ್ಳಿ: ಕ್ರೈಸ್ತ ಸಮುದಾಯಕ್ಕೆ ಮತಾಂತರಕ್ಕೆ ಪ್ರಚೋದಿಸಿದ ಹಾಗೂ ಆಮಿಷ ಒಡ್ಡಿದ ಆರೋಪದ ಕುರಿತು ನಗರದಲ್ಲಿ ಭಾನುವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಕ್ರಿಶ್ಚಿಯನ್ ಸಮುದಾಯದವರು ಸೋಮವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಮಹಾನಗರ ಪಾಲಿಕೆ ಸದಸ್ಯ ದೊರೆರಾಜ ಮಣಿಕುಂಟ್ಲ ನೇತೃತ್ವದಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಹಿಂದೂಪರ ಸಂಘಟನೆಗಳಿಂದ ನಮಗೆ ಅನ್ಯಾಯವಾಗಿದೆ. ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಹಿಂದೂ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಕೂಡ ಪಾಲ್ಗೊಂಡಿದ್ದು ಸರಿಯಲ್ಲ ಎಂದರು.

ADVERTISEMENT

ಈ ಘಟನೆಯನ್ನು ಖಂಡಿಸಲು ಅ. 19ರಂದು ಪ್ರತಿಭಟನೆ ನಡೆಸಲು ಕ್ರಿಶ್ಚಿಯನ್‌ ಸಮುದಾಯದ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಚರ್ಚಿಸಲು ಕೇಶ್ವಾಪುರದ ಸೇಂಟ್ ಪೀಟರ್ಸ್‌ ಚರ್ಚ್‌ನಲ್ಲಿ ಸಭೆ ಜರುಗಿತು. ಪ್ರತಿಭಟನೆಗೆ ಪ್ರಸಾದ ಅಬ್ಬಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಸೋಮು ಅವರಾಧಿ ಎಂಬ ವ್ಯಕ್ತಿ ಪ್ರಚೋದನೆ ನೀಡಿದ್ದು ಆತನನ್ನು ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರು ಭಾನುವಾರ ತಡರಾತ್ರಿಯ ತನಕ ರಸ್ತೆ ಬಂದ್‌ ಹಾಗೂ ಪ್ರತಿಭಟನೆ ಮಾಡಿದ್ದರು.

ಆರೋಪಿ ಬಂಧನ?: ‌ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸೋಮು ಅವರಾಧಿಯನ್ನು ಚಿತ್ರದುರ್ಗದಲ್ಲಿ ನವನಗರ ಪೊಲೀಸರು ಬಂಧಿಸಿದ್ದಾರೆ. ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.