ADVERTISEMENT

ಮಲಪ್ರಭಾ ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 2:00 IST
Last Updated 17 ಸೆಪ್ಟೆಂಬರ್ 2021, 2:00 IST
ನರಗುಂದ ತಾಲ್ಲೂಕಿನ ಕೊಣ್ಣೂರಿನ ಬಳಿ ಮಲಪ್ರಭಾ ಹೊಳೆಯ ನಡುವೆ ಕಂಟಿಯ ಪೊದೆಯಲ್ಲಿ ಸಿಕ್ಕಿಹಾಕೊಂಡಿರುವ ವೃದ್ಧ
ನರಗುಂದ ತಾಲ್ಲೂಕಿನ ಕೊಣ್ಣೂರಿನ ಬಳಿ ಮಲಪ್ರಭಾ ಹೊಳೆಯ ನಡುವೆ ಕಂಟಿಯ ಪೊದೆಯಲ್ಲಿ ಸಿಕ್ಕಿಹಾಕೊಂಡಿರುವ ವೃದ್ಧ   

ನರಗುಂದ (ಗದಗ ಜಿಲ್ಲೆ): ತಾಲ್ಲೂಕಿನ ಕೊಣ್ಣೂರ ಬಳಿ ಮಲಪ್ರಭಾ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಗುರುವಾರ ರಕ್ಷಿಸಿದ್ದಾರೆ.

ನವಿಲುತೀರ್ಥ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು ಹೆಚ್ಚಿನ ನೀರನ್ನು ಮಲಪ್ರಭಾ ಹೊಳೆಗೆ ಹರಿಸಿದ್ದರಿಂದ ಗೋವನಕೊಪ್ಪ ಬಳಿ ಇರುವ ಹಳೆ ಸೇತುವೆ ಜಲಾವೃತಗೊಂಡಿದೆ. ಈ ಸೇತುವೆ ಮೇಲೆ ಸ್ನಾನಕ್ಕೆಂದು ತೆರಳಿದ ಕೊಣ್ಣೂರ ಗ್ರಾಮದ ಬಸವರಾಜ ಫಕ್ಕಿರಪ್ಪ ತಳವಾರ (58) ಎಂಬುವವರು ಕಾಲು ಜಾರಿ ಹೊಳೆಗೆ ಬಿದ್ದರು.

ಪ್ರವಾಹ ಹಚ್ಚಿದ್ದರಿಂದ ತೇಲಿ ಹೋದ ಅವರು ನದಿ ಮಧ್ಯಭಾಗದಲ್ಲಿ ಮುಳ್ಳುಕಂಟಿ ಹಿಡಿದುಕೊಂಡು ಸುಮಾರು ಮೂರು ತಾಸಿಗೂ ಹೆಚ್ಚು ಹೊತ್ತು ಅಲ್ಲಿಯೇ ಇದ್ದರು. ನೀರು ಹೆಚ್ಚಾಗಿ, ಅವರು ಕುಳಿತ ಸ್ಥಳ ನಡುಗಡ್ಡೆಯಾಗಿ ಮಾರ್ಪಟ್ಟಿತ್ತು. ತಾವು ಕುಳಿತ ಕಂಟಿಯು ನೀರಲ್ಲಿ ಕೊಚ್ಚಿಹೋಗುವ ಭೀತಿ ಉಂಟಾಗಿ ರಕ್ಷಣೆಗೆ ಅಂಗಲಾಚಿದರು. ಇದನ್ನು ಗಮನಿಸಿದ ಕೊಣ್ಣೂರ ಹಾಗೂ ಗೋವನಕೊಪ್ಪ
ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ADVERTISEMENT

ಬಾದಾಮಿ ಪೋಲಿಸರು, ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ನಡು ನೀರಿನಲ್ಲಿ ಕಂಟಿಗೆ ಸಿಕ್ಕಿ ಹಾಕಿಕೊಂಡಿದ್ದ ಅವರನ್ನು ಬೋಟ್ ಮೂಲಕ ರಕ್ಷಿಸಿ ಗ್ರಾಮಕ್ಕೆ ಕರೆ ತಂದರು. ನಂತರ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವೃದ್ಧರನ್ನು ಸುರಕ್ಷಿತವಾಗಿ ಮನೆಗೆ ತಲು‍ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.