ADVERTISEMENT

ಚಿನ್ನದ ಗಟ್ಟಿ ವ್ಯವಹಾರ: ವ್ಯಕ್ತಿಯ ಅಪಹರಣಕ್ಕೆ ಯತ್ನಿಸಿದ್ದ 9 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 15:49 IST
Last Updated 13 ಮಾರ್ಚ್ 2023, 15:49 IST
   

ಹಾಸನ: ಚಿನ್ನದ ಗಟ್ಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಅಪಹರಿಸುತ್ತಿದ್ದ 9 ಜನರನ್ನು ಬೇಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹2.03 ಲಕ್ಷ ನಗದು, ಎರಡು ಕಾರು, 20 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

ಕೊಲ್ಕತ್ತದ ಅಮಿನ್‌ ಉಲ್ಲಖ್‌, ಬೆಂಗಳೂರಿನ ಅಜಂ, ಸುಲೇಮಾನ್‌, ಮಹಮ್ಮದ್‌ ಹನೀಫ್‌, ಸೈಯ್ಯದ್‌ ಮುಜಾಹಿದ್‌, ಮುಂಬೈನ ಇಬ್ರಾಹಿಂ, ನದೀಮ್‌, ಮೊಹಮ್ಮದ್‌ ಸೌದ್‌, ಜಾವೆದ್‌ ಅಹ್ಮದ್‌ ಬಂಧಿತ ಆರೋಪಿಗಳು. ಸೈಯ್ಯದ್‌ ಸೈಫ್‌ ಎಂಬುವವರನ್ನು ರಕ್ಷಿಸಲಾಗಿದೆ.

ದುಬೈನ ಏಜೆಂಟ್‌ನಿಂದ ಚಿನ್ನದ ಗಟ್ಟಿ ಪಡೆದಿದ್ದ ಸೈಯ್ಯದ್‌ ಸೈಫ್‌, ಅದನ್ನು ಮುಂಬೈನ ವ್ಯಕ್ತಿಗೆ ತಲುಪಿಸದೇ, ತನ್ನ ಸ್ನೇಹಿತ ಉಡುಪಿಯ ಸಾಜಿದ್‌ಗೆ ಕೊಟ್ಟಿದ್ದರು. ಅದಕ್ಕೆ ಸಾಜಿದ್‌ನಿಂದ ಸೈಯ್ಯದ್‌ ಸೈಫ್‌ ₹80 ಸಾವಿರ ಪಡೆದಿದ್ದರು. ಸೈಯ್ಯದ್‌ ಸೈಫ್‌ ಉಡುಪಿಯ ಸಾಜಿದ್ ಮನೆಯಲ್ಲಿದ್ದಾಗ ಎರಡು ಕಾರುಗಳಲ್ಲಿ ಬಂದ 9 ಆರೋಪಿಗಳು, ಸೈಯ್ಯದ್‌ ಸೈಫ್‌ರನ್ನು ಅಪಹರಿಸಿದ್ದರು.

ADVERTISEMENT

ಬೇಲೂರಿನ ಜೆಪಿನಗರದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಎಎಸ್‌ಐ ನಾಗರಾಜ್‌, ವಾಹನ ತಡೆದು ತಪಾಸಣೆ ನಡೆಸಿದ್ದು, ಈ ಸಂದರ್ಭದಲ್ಲಿ ಅಪಹರಣ ಕೃತ್ಯ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.