ಹಾಸನ: ‘ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಪರಿಕರ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧಕಾನೂನು ಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಆಗ್ರಹಿಸಿದರು.
‘ಜಿಲ್ಲೆಯ 102 ವಿದ್ಯಾರ್ಥಿ ನಿಲಯಗಳಿಗೆ ಪರಿಕರ ಖರೀದಿಯಲ್ಲಿ ಅಂದಾಜು ₹9 ಕೋಟಿ ಅವ್ಯವಹಾರ ನಡೆದಿದೆ. ಒಂದು ಹಾಸಿಗೆಗೆ ₹6,412 ರಂತೆ 3,366 ಹಾಸಿಗೆಗಳನ್ನು₹2.15 ಕೋಟಿ ನೀಡಿ ಖರೀದಿಸಲಾಗಿದೆ. ₹20,236 ಬೆಲೆಯ 148 ಡೆಸ್ಕ್ಗಳನ್ನು ₹30ಲಕ್ಷ ನೀಡಿ ಖರೀದಿಸಲಾಗಿದೆ. ವಾಟರ್ ಹೀಟರ್ ಮತ್ತು ಸೋಲಾರ್ ಅನ್ನು ₹32 ಲಕ್ಷಕ್ಕೆಖರೀದಿಸಲಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.
₹80 ಲಕ್ಷ ವೆಚ್ಚದಲ್ಲಿ ಯುಪಿಎಸ್, ವಾಟರ್ ಪ್ಯೂರಿಫೈರ್ ಹಾಗೂ ಲ್ಯಾಪ್ಟಾಪ್ ಖರೀದಿಸಲಾಗಿದೆ.ಒಂದು ಲೀಟರ್ ಸ್ಯಾನಿಟೈಸರ್ ₹ 2,150 ಹಾಗೂ ₹ 21 ಲಕ್ಷ ವೆಚ್ಚದ ಪಾತ್ರೆಗಳನ್ನುಖರೀದಿಸಲಾಗಿದೆ. ಹೀಗೆ ವಸ್ತುಗಳನ್ನು ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಿಖರೀದಿಸಲಾಗಿದೆ’ ಎಂದು ಆರೋಪಿಸಿದರು.
‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹರ್ಷ, ಇಲಾಖೆಯ ಇತರೆ ಅಧಿಕಾರಿಗಳುಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಇಲಾಖೆಗೆಸಾಮಗ್ರಿಗಳನ್ನು ಸರಬರಾಜು ಮಾಡಿರುವ ರಾಜ್ಯ ಕಾಯರ್ ಕೋ-ಆಪರೇಟೀವ್ ಫೆಡರೇಷನ್ ಲಿ.,ಎಂ.ಎಸ್.ಐ.ಎಲ್., ಕಿಯೋನಿಕ್ಸ್, ಕೆ.ಎಸ್.ಇ.ಡಿಸಿ ಇಲಾಖೆಗಳಲ್ಲಿ ಇತರೆ ಖಾಸಗಿ ವ್ಯಕ್ತಿಗಳುಭಾಗಿಯಾಗಿದ್ದಾರೆ’ ಎಂದು ಹೇಳಿದರು.
‘20 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸಾಮಗ್ರಿಗಳನ್ನು ಖರೀದಿ ಮಾಡಬೇಕಾದರೆ, ಟೆಂಡರ್ ಕರೆಯಬೇಕು.ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬೇಕು. ಈ ಎಲ್ಲಾ ನಿಯಮಗಳನ್ನು ಇಲಾಖೆ ಅಧಿಕಾರಿಗಳು ಗಾಳಿಗೆತೂರಿದ್ದಾರೆ’ ಎಂದು ಆರೋಪಿಸಿದರು.
‘ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಭ್ರಷ್ಟ ಅಧಿಕಾರಿಯನ್ನು ವಹಿಸಿಕೊಂಡು ಹೇಳಿಕೆನೀಡಿದ್ದಾರೆ. ಬಿಜೆಪಿಯವರೂ ಇದಕ್ಕೆ ಸಹಕಾರ ನೀಡುವ ಮೂಲಕ ಭ್ರಷ್ಟ ಅಧಿಕಾರಿ ಪರ ವಕಾಲತ್ತುವಹಿಸಿದ್ದಾರೆ’ ಎಂದು ಟೀಕಿಸಿದರು.
‘ಇಲಾಖೆಯಲ್ಲಿ ನಡೆದಿರುವ ಈ ಭ್ರಷ್ಟಾಚಾರದ ಬಗ್ಗೆ ಇಲಾಖೆ ಸಚಿವರು,ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಉತ್ತರ ನೀಡಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಗೆವಾಳು ದ್ಯಾವಪ್ಪ, ಪುಟ್ಟಸ್ವಾಮಿಗೌಡ, ಅಶೋಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.