ಹಾಸನ: ಇಲ್ಲಿನ ನಗರಸಭೆ ಅಧ್ಯಕ್ಷ ಆರ್.ಮೋಹನ್ 34ನೇ ವಾರ್ಡ್ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸುವ ಆಟೊಟಿಪ್ಪರ್ ಚಲಾಯಿಸುತ್ತಿದ್ದಾರೆ.
ನಗರದಲ್ಲಿ ಕಸ ಸಂಗ್ರಹಿಸುವ ನಗರಸಭೆಯ ಆಟೊಟಿಪ್ಪರ್ ಚಾಲಕರು ಮುಷ್ಕರ ನಡೆಸುತ್ತಿದ್ದು, ವಾರದಿಂದ ಮನೆ-ಮನೆ ಕಸ ಸಂಗ್ರಹ ಕಾರ್ಯ ಸ್ಥಗಿತಗೊಂಡಿದೆ. ಹೀಗಾಗಿ, ಅಧ್ಯಕ್ಷರೇ ಈ ಕಾರ್ಯಕ್ಕಿಳಿದಿದ್ದಾರೆ.
ಗುರುತು ಪತ್ತೆಯಾಗದಿರಲೆಂದು ಟೋಪಿ ಹಾಗೂ ಮಾಸ್ಕ್ ಧರಿಸಿ ಮನೆ ಬಾಗಿಲಿಗೆ ವಾಹನದೊಂದಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ಅವರ ಈ ನಡೆ ನಿವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
‘ಕೆಲ ದಿನಗಳಿಂದ ಕಸ ಸಂಗ್ರಹಣೆ ಆಟೊಟಿಪ್ಪರ್ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಬಡಾವಣೆಗಳಲ್ಲಿ ಕಸ ಹಾಗೆಯೇ ಇರುವುದು ಗಮನಕ್ಕೆ ಬಂದಿತ್ತು. ಅಲ್ಲದೇ ರಸ್ತೆಗಳ ಪಕ್ಕದಲ್ಲಿ ಎಸೆದಿರುವುದೂ ನಡೆಯುತ್ತಿತ್ತು. ಹೀಗಾಗಿ ನಾನೇ ಆಟೊಟಿಪ್ಪರ್ ಚಲಾಯಿಸುತ್ತಿದ್ದೇನೆ. ಇದರಲ್ಲಿ ಹೆಚ್ಚುಗಾರಿಕೆ ಏನಿಲ್ಲ. ನಮ್ಮ ಕೆಲಸ ಮಾಡುತ್ತಿದ್ದೇವಷ್ಟೆ’ ಎಂದು ಮೋಹನ್ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.