ಹಾವೇರಿ: ಹೃದಯಾಘಾತದಿಂದ ಮೃತರಾದ ವ್ಯಕ್ತಿಯ ಕುಟುಂಬದವರಿಗೆ ವಿಮೆ ಹಣ ಪಾವತಿಸಲು ನಿರಾಕರಿಸಿದ ಕೋಟಕ್ ಮಹಿಂದ್ರ ಜೀವ ವಿಮಾ ಕಂಪನಿಗೆ, ಕರಾರು ಒಪ್ಪಂದದ ಪ್ರಕಾರ ಕನಿಷ್ಠ ಶೇ 6ರ ಬಡ್ಡಿಯೊಂದಿಗೆ 30 ದಿನದೊಳಗಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ರಾಣೇಬೆನ್ನೂರು ನಗರದ ಭರಮಗೌಡ ಶಂಕರಗೌಡ ಮರಿಗೌಡರ ಅವರು ‘ಕೋಟಕ್ ಪ್ರೀಮಿಯರ್ ಎಂಡೋಮೆಂಟ್ ಪ್ಲ್ಯಾನ್’ ಹೆಸರಿನಲ್ಲಿ ₹7.54 ಲಕ್ಷ ಮೊತ್ತದ ಪಾಲಿಸಿ ಮಾಡಿಸಿದ್ದರು.
ವಿಮಾ ಪಾಲಿಸಿದಾರ 2019ರ ಡಿಸೆಂಬರ್ 2ರಂದು ಮರಣ ಹೊಂದಿದ ಕಾರಣ, ಮೃತರ ಪತ್ನಿ ಹಾಗೂ ಮೂರು ಮಕ್ಕಳು ತಮಗೆ ಬರಬೇಕಾದ ವಿಮೆ ಹಣವನ್ನು ನೀಡಲು ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು.
ಪಾಲಿಸಿ ನೋಂದಣಿ ಸಂದರ್ಭದಲ್ಲಿ ಭರಮಗೌಡ ಅವರು ಆರೋಗ್ಯ ಸಮಸ್ಯೆ ಬಗ್ಗೆ ಸತ್ಯ ಮರೆಮಾಚಿ ವಿಮೆ ಮಾಡಿಸಿದ್ದರು ಎಂದು ನೆಪ ಹೇಳಿ ವಿಮಾ ಕಂಪನಿಯು ಹಣವನ್ನು ನೀಡಲು ನಿರಾಕರಿಸಿತ್ತು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಪಾಲಿಸಿದಾರರ ಪರವಾಗಿ ಆದೇಶ ಹೊರಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.