ಹಾವೇರಿ: ದೆಹಲಿಯ ರೈತ ಸಂಘಟನೆಗಳ ಹೋರಾಟದ ಕರೆಯ ಮೇರೆಗೆ ‘ಭಾರತ್ ಬಂದ್’ ಬೆಂಬಲಿಸಿ, ಸೆ.27ರಂದು ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಸಾವಿರಾರು ರೈತರೊಂದಿಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬಾರ್ಕಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಖಂಡ ಭಾರತದ ರೈತರ ಬದುಕಿಗೋಸ್ಕರ ಹಾಗೂ ರೈತ ಸಂಸ್ಕೃತಿಯ ಸಂರಕ್ಷಣೆಯ ಸಲುವಾಗಿ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಉಳಿವಿಗಾಗಿ ದೆಹಲಿಯ ಗಡಿಯಲ್ಲಿ 360 ದಿನಗಳಿಂದ ರೈತರು ಪ್ರಾಣದ ಹಂಗು ತೊರೆದು ಧರಣಿ ನಡೆಸುತ್ತಿದ್ದಾರೆ. ರೈತರ ಪ್ರಮುಖ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ, ‘ಭಾರತ್ ಬಂದ್’ ನಡೆಸಲಾಗುತ್ತಿದೆ ಎಂದರು.
ಭೂಸುಧಾರಣಾ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಹೋರಾಟ ನಡೆಸುತ್ತೇವೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು. ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸುತ್ತೇವೆ. ಬಡವರಿಗೆ ಶಿಕ್ಷಣವನ್ನು ನಿರಾಕರಣೆ ಮಾಡುವ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ವಿರೋಧಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೇಣುಕಾ ಮುದಿಗೌಡರ, ಸಿದ್ದನಗೌಡ ಕುಲಕರ್ಣಿ, ಬಿ.ಎಂ.ಕುಳೇನೂರ, ನೀಲಪ್ಪ ಹರಿಜನ, ವಿರೂಪಾಕ್ಷಪ್ಪ ಹಾವಣಗಿ, ರಾಜನಗೌಡ, ಪ್ರಕಾಶ ರಾಂಪುರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.