ಕಲಬುರ್ಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಬಡ ಮಕ್ಕಳನ್ನು ಸಕಾಲಕ್ಕೆ ಪರೀಕ್ಷಾ ಕೇಂದ್ರಕ್ಕೆ ಉಚಿತವಾಗಿ ತಲುಪಿಸುವ ನಿಟ್ಟಿನಲ್ಲಿ ಹೀರಾಪುರದಆಟೊ ಚಾಲಕ ನಾಗಯ್ಯ ಗುತ್ತೇದಾರ ಅವರು ತಮ್ಮ ಆಟೊ ರಿಕ್ಷಾವನ್ನು ಪರೀಕ್ಷೆ ಮುಗಿಯುವವರೆಗೆ ಮೀಸಲಿಟ್ಟಿದ್ದಾರೆ.
ಗುರುವಾರದಿಂದ ಆರಂಭವಾದ ಪರೀಕ್ಷೆಗೆ ನಗರದ ವಿವಿಧ ಭಾಗಗಳಿಂದ ಮಕ್ಕಳನ್ನು ಕರೆದುಕೊಂಡು ಪರೀಕ್ಷಾ ಕೇಂದ್ರಗಳಾದ ಎನ್.ವಿ. ಪ್ರೌಢಶಾಲೆ, ಡಾಲ್ಫಿನ್ ಪ್ರೌಢಶಾಲೆ, ಹುಸೇನಿ ಪಬ್ಲಿಕ್ ಸ್ಕೂಲ್ಗೆ ಕರೆದುಕೊಂಡು ಹೋದರು. ಪರೀಕ್ಷೆ ಮುಗಿದ ಬಳಿಕ ನಗರದ ನೊಬೆಲ್ ಪ್ರೌಢಶಾಲೆಯಿಂದ ಸಂತೋಷ ನಗರಕ್ಕೆ ಕರೆದೊಯ್ದರು. ತಾಲ್ಲೂಕಿನ ಕಣ್ಣಿ ಗ್ರಾಮದಿಂದ ಬಂದಿದ್ದ ಬಾಲಕನನ್ನೂ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದರು.
ತಮ್ಮ ಸೇವೆಯ ಬಗ್ಗೆ ಮಾಹಿತಿ ನೀಡಿದ ನಾಗಯ್ಯ, ‘1993ರಿಂದಲೇ ನಾನು ಆಟೊ ಓಡಿಸುತ್ತಿದ್ದೇನೆ. ಇದರಿಂದಲೇ ಮೂರು ಆಟೊಗಳನ್ನು ಹೊಂದಿದ್ದು, ಎರಡು ಆಟೊಗಳು ಪ್ರಯಾಣಿಕರನ್ನು ಕರೆದೊಯ್ದರೆ, ಒಂದು ಆಟೊದಲ್ಲಿ ನಾನೇ ಖುದ್ದಾಗಿ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಪುಕ್ಕಟೆಯಾಗಿ ಕರೆದುಕೊಂಡು ಹೋಗುತ್ತೇನೆ. ಆಟೊದ ಮೇಲೆ ನನ್ನ ಫೋನ್ ಸಂಖ್ಯೆಯನ್ನೂ ಬರೆದಿದ್ದೇನೆ. ಅಗತ್ಯ ಇರುವವರು ಈ ಸೇವೆಯನ್ನು ಬಳಸಿಕೊಳ್ಳಬಹುದು. ಆದರೆ, ಅರ್ಧ ಗಂಟೆ ಮುಂಚಿತವಾಗಿ ಕರೆ ಮಾಡಿದರೆ ಸಕಾಲಕ್ಕೆ ಕರೆದೊಯ್ಯುವೆ. ಪರೀಕ್ಷೆ ಮುಗಿಯುವವರೆಗೂ ಉಚಿತ ಸೇವೆ ಮುಂದುವರಿಯಲಿದೆ’ ಎಂದರು.
ನಾಗಯ್ಯ ಗುತ್ತೇದಾರ ಅವರ ಮೊಬೈಲ್ ಸಂಖ್ಯೆ 98802 30301.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.