ADVERTISEMENT

ಸೋಮವಾರಪೇಟೆ: ನಂಬಿದವರಿಗೆ ಇಂಬು ಕೊಡುವ ದೇಗುಲ

ವಿಜೃಂಭಣೆಯ ಜಾತ್ರೋತ್ಸವಕ್ಕೆ ಸಿದ್ಧತೆ; ಎಲ್ಲ ಧರ್ಮೀಯರೂ ಭಾಗಿ

ಡಿ.ಪಿ.ಲೋಕೇಶ್
Published 7 ಮಾರ್ಚ್ 2023, 5:53 IST
Last Updated 7 ಮಾರ್ಚ್ 2023, 5:53 IST
ಮುತ್ತಪ್ಪ
ಮುತ್ತಪ್ಪ   

ಸೋಮವಾರಪೇಟೆ: ಇಲ್ಲಿನ ಮುತ್ತಪ್ಪ ಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯಗಳೂ ಕೊಡಗಿನಲ್ಲಿ ಪ್ರಮುಖವಾಗಿದ್ದು, ಭಕ್ತರ ಬೇಡಿಕೆಯನ್ನು ಈಡೇರಿಸುವ ತಾಣವಾಗಿದೆ ಎಂಬ ಪ್ರತೀತಿ ಇದೆ. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತದೆ. ಧಾರ್ಮಿಕ ಉತ್ಸವದಲ್ಲಿ ಎಲ್ಲಾ ಜಾತಿ ಜನಾಂಗದವರು ಭಾಗವಹಿಸುವುದು ವಿಶೇಷವಾಗಿದೆ.

ನಂಬಿದವರಿಗೆ ಇಂಬು ಕೊಡುವ ಹಾಗೂ ಸಮಸ್ತ ಭಕ್ತಾಧಿ ಜನರ ಧಾರ್ಮಿಕ, ಭಕ್ತಿ-ಭಾವಗಳಿಗೆ ಶಕ್ತಿ ತುಂಬುವ ತಾಣವೇ ಈ ಸೋಮವಾರ ಪೇಟೆಯ ಮುತ್ತಪ್ಪಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯ.

ಮಡಿಕೇರಿ, ಕುಶಾಲನಗರ ಮಾರ್ಗವಾಗಿ ಸೋಮವಾರಪೇಟೆಯತ್ತ ಸಾಗಿ ಬರುವವರನ್ನು ಹಾಗೂ ನಗರ ದಿಂದ ಹೊರಕ್ಕೆ ಪ್ರಯಾಣಿಸುವವರನ್ನು ನಗರದ ಕಕ್ಕೆಹೊಳೆ ಸಮೀಪದಲ್ಲಿದೆ ಈ ಅಪೂರ್ವ ದೇವಾಲಯ.

ADVERTISEMENT

ಈ ದೇವಾಲಯಕ್ಕೆ ಸುಮಾರು 300ಕ್ಕೂ ಅಧಿಕ ವರ್ಷಗಳ ಇತಿಹಾಸ ವಿದ್ದು, ದೇವಾಲಯವಿರುವ ಜಾಗ ಯಜ್ಞ-ಯಾಗಾದಿಗಳು ನಡೆದ ಸ್ಥಳ ಮಾತ್ರವಲ್ಲ, ಪೂರ್ವದಲ್ಲಿ ಈ ಪ್ರದೇಶ ಕಾಡುಗಳಿಂದ ಆವೃತವಾಗಿತ್ತು. ಇಲ್ಲಿ ಋಷಿ-ಮುನಿಗಳು ತಪಸ್ಸಿಗೆ ಕುಳಿತು ಇಡೀ ಭುವನವನ್ನೆ ತನ್ನ ಅಧೀನದಲ್ಲಿಟ್ಟುಕೊಂಡಿದ್ದ ಶಕ್ತಿ ದೇವತೆ ಭುವನೇಶ್ವರಿಯ ವರಸಿದ್ದಿಗಾಗಿ ತಪಸ್ಸು ಮಾಡಿ ಯಶಸ್ಸು ಕಂಡ ಪವಿತ್ರ ಸ್ಥಳ ಇದಾಗಿದೆ ಎಂಬ ನಂಬಿಕೆ ಇದೆ. 1999 ರ ಫೆಬ್ರವರಿ 24 ಹಾಗೂ 25ರಂದು ದೇವಾಲಯದಲ್ಲಿ ಇರಿಸಿದ್ದ ಅಷ್ಠಮಂಗಲ ಪ್ರಶ್ನೆಯಿಂದ ಈ ಕಥೆ ಗೊತ್ತಾಯಿತು.

ಸುಮಾರು 100 ವರ್ಷಗಳ ಹಿಂದೆ ಬಡ ಕುಟುಂಬದಲ್ಲಿ ಜನಿಸಿದ ಪಕೀರ ಪೂಜಾರಿ ಎಂಬುವವರು ಮುತ್ತಪ್ಪ ದೈವವನ್ನು ಪೂಜಿಸಲು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ವಾರ್ಷಿಕವಾಗಿ ಮುತ್ತಪ್ಪನಿಗೆ ಕೋಲ ಅರ್ಪಿಸಬೇಕೆಂಬ ಅಭಿಲಾಷೆಯನ್ನು ಇನ್ನಿತರ ಭಕ್ತ ರೊಂದಿಗೆ ವ್ಯಕ್ತಪಡಿಸಿದಾಗ, ಕೆಲವು ಮಂದಿ ಸೇರಿ ಮುತ್ತಪ್ಪ ಕೋಲ ನಡೆಸಲು ಮುಂದಾದರು.

ಪ್ರತಿವರ್ಷ ಒಂದೊಂದು ಸಹದೈವ ಗಳು ನೆಲೆ ನಿಂತು ಇಂದು ಒಂಬತ್ತು ದೈವಗಳಿಗೆ ಕೋಲವನ್ನು ನಡೆಸುತ್ತಾ, ದೈವಗಳ ಉತ್ಸವವಾಗಿಯೇ ಶೃದ್ಧಾ-ಭಕ್ತಿಯಿಂದ ಅದ್ದೂರಿಯಾಗಿ ಮೂರು ದಿನಗಳ ಕಾಲ ಆಚರಿಸಿಕೊಂಡು ಬರಲಾಗುತ್ತಿದೆ.

ಮುತ್ತಪ್ಪಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಪೂಜೆಗಳು ಶೃದ್ಧೆ-ಭಕ್ತಿಯಿಂದ ಅದ್ದೂರಿ ಯಾಗಿ ನಡೆಯುತ್ತವೆ. ಅಯ್ಯಪ್ಪಸ್ವಾಮಿ ದೇವಾಲಯದ ಕೆಳಭಾಗದಲ್ಲಿ ಮುತ್ತಪ್ಪ ಹಾಗೂ ಸಹದೈವಗಳಿವೆ. ಇಲ್ಲಿ ಪೂಜಾರಿ (ಮಡೆಯನ್) ಪ್ರತಿನಿತ್ಯ ಪ್ರಾತಃಕಾಲ ಹಾಗೂ ಸಂಧ್ಯಾಕಾಲ ಪೂಜಿಸಲಾಗುತ್ತಿರುವ ದೈವಗಳಾದ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಭಗವತಿ, ರಕ್ತಚಾಮುಂಡಿ, ಕಂಡಕರ್ಣ, ಕರಿಂಗುಟ್ಟಿಶಾಸ್ತಾವು, ಶ್ರೀಪೊಟ್ಟನ್ ಹಾಗೂ ಗುಳಿಗನ್ ದೈವಗಳು.

ಈ 9 ದೈವಗಳಿಗೂ ವರ್ಷದ ಮಾರ್ಚ್ ತಿಂಗಳಲ್ಲಿ ವಿಶೇಷ ವೇಷ ಭೂಷಣ ಹಾಗೂ ಚಂಡೆ ಸದ್ದಿನೊಂದಿಗೆ ವೆಳ್ಳಾಟಂ ಹಾಗೂ ಕೋಲಗಳು ಪ್ರತ್ಯೇಕವಾಗಿ ಹಗಲಿರುಳೆನ್ನದೆ 2 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಭಕ್ತ ಸಾಗರದ ಸಮ್ಮುಖದಲ್ಲಿ ಜರುಗುತ್ತದೆ. ಇಲ್ಲಿ ಜಾತ್ರೆಗೆ ಅತೀ ಹೆಚ್ಚಿನ ಭಕ್ತರು ಸೇರುತ್ತಿದ್ದು ಈ ಜಾತ್ರೋತ್ಸವ ಜಿಲ್ಲೆಗೆ ಮಾದರಿಯಾಗಿ ಪ್ರಖ್ಯಾತಿ ಪಡೆದಿದೆ. ಪ್ರತಿವರ್ಷ ಜಾತ್ರೋತ್ಸವದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಇರುತ್ತದೆ. ಇಲ್ಲಿನ ದೈವಗಳ ವೇಷ- ಭೂಷಣ ಹಾಗೂ ನರ್ತನಗಳು ಮಲಬಾರ್ ಹಾಗೂ ತುಳುನಾಡ ಜಾನಪದ ಸಂಪತ್ತು ಎಂದೇ ಬಿಂಬಿತವಾಗಿದೆ.

ವಾರ್ಷಿಕೋತ್ಸವದ ಸಂದರ್ಭ ಇಲ್ಲಿನ ಒಂಬತ್ತೂ ದೈವಗಳೂ ವೇಷ-ಭೂಷಣ ತೊಟ್ಟು ಮೈಮೇಲೆ ಆವೇಶ ಬಂದು ನರ್ತಿಸಿದ ನಂತರದಲ್ಲಿ ತನ್ನ ಬಳಿ ಬರುವ ಭಕ್ತರ ಸಂಕಷ್ಟಗಳ ಬಗ್ಗೆ ಸ್ಪಂದಿಸಿ, ಅವರ ಬೇಕು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆಗಳನ್ನು ನೀಡುತ್ತದೆ. ಇಲ್ಲಿ ಬರುವ ಭಕ್ತರು ಭಯ-ಭಕ್ತಿಯಿಂದ ಈ ದೈವಗಳನ್ನು ನಿತ್ಯ ಸ್ಮರಿಸಿಕೊಂಡು ತಮ್ಮ ಬೇಡಿಕೆಯಿಟ್ಟು ಪ್ರಾರ್ಥಿಸಿದಲ್ಲಿ ಅದು ಈಡೇರುತ್ತದೆ. ತಮ್ಮ ಮನೆಯಲ್ಲಿನ ದನ-ಕ ರುಗಳಿಗೆ ಅಥವಾ ಸಾಕು ಪ್ರಾಣಿಗಳಿಗೆ ಆನಾರೋಗ್ಯ ಕಾಡಿದಲ್ಲಿ ಈ ದೈವಕ್ಕೆ ಹರಕೆ ಹೊತ್ತಲ್ಲಿ ಕೂಡಲೇ ಆರೋಗ್ಯ ವಾಗಿತ್ತದೆ ಎಂಬೂದು ಕೂಡ ದೈವವನ್ನು ನಂಬಿ ಯಶಸ್ಸು ಕಂಡವರ ಆನಿಸಿಕೆ.

ಶೈವರು ಪೂಜಿಸುವ ಶಿವ ಇಲ್ಲಿ ಮುತ್ತಪ್ಪ (ಮುತ್ತಪ್ಪೇಶ್ವರ)ನಾಗಿ ಹಾಗೂ ವೈಷ್ಣವರು ಪೂಜಿಸುವ ವಿಷ್ಣು ಇಲ್ಲಿ ವಿಷ್ಣುಮೂರ್ತಿ ಹಾಗು ಸಹದೈವಗಳಾಗಿ ಪೂಜಿಸಲ್ಪಡುತ್ತಿರುವುದರಿಂದ ಈ ದೇವಾಲಯ ಶೈವ ಹಾಗೂ ವೈಷ್ಣವರ ಸಂಗಮ ತಾಣವಾಗಿಯೂ ಬಿಂಬಿತವಾಗಿದೆ.

(ಸರಣಿ ಮುಕ್ತಾಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.