ಮಡಿಕೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 18ರಂದು ಕೊಡಗು ಜಿಲ್ಲೆಯಲ್ಲಿ ಹಲವು ಭವನಗಳನ್ನು ಉದ್ಘಾಟಿಸಲಿದ್ದು, ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಂದು ಮಧ್ಯಾಹ್ನ 12ಗಂಟೆಗೆ ಕೆ.ಬಾಡಗ ಗ್ರಾಮದ ಗಾಲ್ಫ್ ಮೈದಾನ ಹೆಲಿಪ್ಯಾಡ್ಗೆ ಆಗಮಿಸಲಿರುವ ಅವರು 12.15ಕ್ಕೆ ನಗರದ ಗಾಂಧಿ ಮೈದಾನದಲ್ಲಿ ನಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಳಿಕ ಮಧ್ಯಾಹ್ನ 3.10ಕ್ಕೆ ನಾಪೋಕ್ಲುವಿನ ಬೇತು ಗ್ರಾಮದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 23ನೇ ಅಪ್ಪಚೆಟ್ಟೋಳಂಡ ಪ್ರಾಯೋಜಕತ್ವದಲ್ಲಿ ನಡೆಯುವ 2022-23 ನೇ ಸಾಲಿನ ‘ಕೊಡವ ಹಾಕಿ ಉತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ.
ಮಡಿಕೇರಿಯ ಸಮಾವೇಶದಲ್ಲಿ ಅವರು ಕೊಡಗು ಜಿಲ್ಲೆಯ ವಿವಿಧ ತಾಲ್ಲೂಕು ವ್ಯಾಪ್ತಿಯಲ್ಲಿರುವ ಪೂರ್ಣ ಗೊಂಡಿರುವ ಕಾಮಗಾರಿಗಳನ್ನು ಉದ್ಘಾಟಿಸಿದರೆ, ನಡೆಯಲಿರುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸುಂಟಿಕೊಪ್ಪ, ವಿರಾಜಪೇಟೆಯ ಈಚೂರು ಮುಗಟಗೇರಿ, ಗುಂಡಿಗೆರೆ ಗಳಲ್ಲಿ ಅಂಗನವಾಡಿ ಕೇಂದ್ರಗಳು, ಸೋಮವಾರಪೇಟೆ, ಶನಿವಾರಸಂತೆ, ವಿರಾಜಪೇಟೆಯ ಅಮ್ಮತ್ತಿ, ಪೊನ್ನಂ ಪೇಟೆಯ ಹುದಿಕೇರಿ, ಪೊನ್ನಂಪೇಟೆಯ ಶ್ರೀಮಂಗಲಗಳಲ್ಲಿ ರೈತ ಸಂಪರ್ಕ ಕೇಂದ್ರಗಳು, ಸೋಮವಾರಪೇಟೆ, ಕೊಡ್ಲಿಪೇಟೆ, ವಿರಾಜಪೇಟೆ, ಶಾಂತಳ್ಳಿ ಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ, ಕುಶಾಲನಗರದ ಬಸವನಹಳ್ಳಿಯಲ್ಲಿ ವಾಲ್ಮೀಕಿ ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ, ಕುಶಾಲನಗರದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆಯಾಗಲಿದೆ.
ಗೋಣಿಕೊಪ್ಪದ ಅಗ್ನಿಶಾಮಕ ಠಾಣೆ ನೂತನ ಕಟ್ಟಡ, ಮಡಿಕೇರಿ, ಕೊಯನಾಡು, ಕುಶಾಲನಗರ, 7ನೇ ಹೊಸಕೋಟೆಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳು, ಕುಶಾಲನಗರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನಿಲಯ, ವಿರಾಜಪೇಟೆಯಲ್ಲಿ ನೀರಿನ ಸಂಪರ್ಕಕ್ಕಾಗಿ ಕಾವೇರಿ ನದಿ ಬೇತ್ರಿ ಗ್ರಾಮದಲ್ಲಿ , ಸೋಮವಾರಪೇಟೆಯ ನೀರಿನ ಸಂಪರ್ಕಕ್ಕೆ ಹಾರಂಗಿಯಿಂದ ನೀರು ಸರಬರಾಜು ಯೋಜನೆಗಳೂ ಇದರಲ್ಲಿವೆ ಸೇರಿವೆ.
ಶಂಕುಸ್ಥಾಪನಾ ಕಾರ್ಯಕ್ರಮಗಳು
ಮಡಿಕೇರಿಯಲ್ಲಿ ಐಟಿಡಿಪಿ ಕಚೇರಿ ಜಿಲ್ಲಾ ನೂತನ ಕಟ್ಟಡ ನಿರ್ಮಾಣಕ, ಕರಿಕೆಯ ವಾಲ್ಮೀಕಿ ಆಶ್ರಮ ಶಾಲೆಗೆ ನೂತನ ಕಟ್ಟಡ, ಪೊನ್ನಂಪೇಟೆಯಲ್ಲಿ ವಾಲ್ಮೀಕಿ ಆಶ್ರಮ ಶಾಲೆ, ನಾಗರಹೊಳೆ ನೂತನ ಕಟ್ಟಡ, ಸೋಮವಾರಪೇಟೆಯಲ್ಲಿ ಯಡವನಾಡು ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ ನಿರ್ಮಾಣ, ಪೊನ್ನಂಪೇಟೆಯಲ್ಲಿ ಕೋತೂರು ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ, ಮಡಿಕೇರಿ-ಕಟ್ಟಪಳ್ಳಿ ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ, ಮೂಲನಿವಾಸಿ ಜೇನುಕುರುಬ ಜನಾಂಗದ ಅಭಿವೃದ್ಧಿ ಯೋಜನೆಯಡಿ ಹಾಡಿಗಳಿಗೆ ಮೂಲಸೌಕರ್ಯ ಒದಗಿಸುವ ಕಾಮಗಾರಿ, ಮಡಿಕೇರಿ-ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಇನ್ನೂ ಅನೇಕ ಕಾಮಗಾರಿಗಳಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.