ADVERTISEMENT

ಮತಗಟ್ಟೆಗೆ ಬರಲಾಗದವರಿಗೆ ಅಂಚೆ ಮತಪತ್ರ

80 ವರ್ಷ ದಾಟಿದವರು, ಅಂಗವಿಕಲರು, ಕೋವಿಡ್‌ ರೋಗಿಗಳಿಗೆ ಚುನಾವಣಾ ಆಯೋಗದಿಂದ ವಿಶಿಷ್ಟ ಅವಕಾಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 6:18 IST
Last Updated 22 ಮಾರ್ಚ್ 2023, 6:18 IST
ಡಾ.ಬಿ.ಸಿ.ಸತೀಶ, ಜಿಲ್ಲಾಧಿಕಾರಿ, ಕೊಡಗು
ಡಾ.ಬಿ.ಸಿ.ಸತೀಶ, ಜಿಲ್ಲಾಧಿಕಾರಿ, ಕೊಡಗು   

ಮಡಿಕೇರಿ: 80ವರ್ಷ ಮೀರಿದ ಹಿರಿಯರು, ಅಂಗವಿಕಲರು, ಕೋವಿಡ್ ರೋಗಿಗಳು ಹಾಗೂ ಅಗತ್ಯ ಸೇವೆಯಲ್ಲಿ ರುವವರು ಮತಗಟ್ಟೆ ಕೇಂದ್ರಕ್ಕೆ ತೆರಳಲು ಆಗದಿದ್ದರೆ ಅವರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಚುನಾ ವಣಾ ಆಯೋಗ ಅವಕಾಶ ಕಲ್ಪಿಸಿದೆ.

‘ಅಗತ್ಯ ಸೇವೆಯಲ್ಲಿರುವ ವಿದ್ಯುತ್, ಬಿಎಸ್‍ಎನ್‍ಎಲ್, ರೈಲ್ವೆ, ದೂರ ದರ್ಶನ, ಆಕಾಶವಾಣಿ, ಆರೋಗ್ಯ, ವಿಮಾನಯಾನ, ರಾಜ್ಯ ರಸ್ತೆ ಸಾರಿಗೆ ನಿಗಮ, ಅಗ್ನಿಶಾಮಕ, ಮಾಧ್ಯಮ, ಸಂಚಾರಿ ಪೊಲೀಸ್ ಹಾಗೂ ಆಂಬುಲೆನ್ಸ್‌ನಲ್ಲಿ ಸೇವೆ ನಿರ್ವಹಿಸುತ್ತಿರುವವರು ‘ಅಂಚೆ ಮತಪತ್ರ’ ಪಡೆದು ಮತದಾನ ಮಾಡಬ ಹುದು’ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಂಚೆ ಮತದಾರನು ಒಂದು ಬಾರಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವುದಾಗಿ ಆಯ್ಕೆ ಮಾಡಿಕೊಂಡಲ್ಲಿ, ಯಾವುದೇ ಕಾರಣಕ್ಕೂ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಆಗುವುದಿಲ್ಲ’ ಎಂದೂ ಅವರು ಹೇಳಿದರು.

ADVERTISEMENT

ಚುನಾವಣಾಧಿಕಾರಿಯು ಮತದಾ ರರ ಪಟ್ಟಿ ಗುರುತು ಮಾಡಿದ ಪ್ರತಿಯನ್ನು ಅವರ ಹೆಸರಿನ ಮುಂದೆ ‘ಪಿಬಿ’ (ಪೋಸ್ಟಲ್ ಬ್ಯಾಲೆಟ್) ಎಂದು ನಮೂದಿಸುತ್ತಾರೆ. ಅಂಚೆ ಮತಪತ್ರ ವನ್ನು ನೀಡಲಾದ ಮತದಾರನಿಗೆ ಮತದಾನ ಕೇಂದ್ರದಲ್ಲಿ ಮತ ಹಾಕಲು ಅನುಮತಿ ನೀಡುವುದಿಲ್ಲ ಎಂದರು.

ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕದಂದು, ಅಂಚೆ ಮತದಾರರ ಪಟ್ಟಿಯನ್ನು ಅಂತಿಮ ಗೊಳಿಸಲಾಗುವುದು. ಚುನಾವಣೆಯು ಮುಕ್ತಾಯಗೊಳ್ಳುವವರೆಗೂ ಆ ಪಟ್ಟಿಯಲ್ಲಿ ಯಾವುದೇ ಹೆಚ್ಚುವರಿ ಸೇರ್ಪಡೆ ಅಥವಾ ತೆಗೆದು ಹಾಕುವಿಕೆ ಮಾಡುವುದಿಲ್ಲ ಎಂದರು.

ಬೂತ್ ಮಟ್ಟದ ಅಧಿಕಾರಿಗಳು ಮತದಾನ ಕೇಂದ್ರವಿರುವ ಪ್ರದೇಶದಲ್ಲಿ ಚುನಾವಣಾಧಿಕಾರಿಯು ಒದಗಿಸಿದ ವಿವರಗಳ ಅನುಸಾರ ಎವಿಎಸ್‍ಸಿ, ಎವಿಪಿಡಿ ಮತ್ತು ಎವಿಸಿಒ ಪ್ರವರ್ಗಗಳಲ್ಲಿನ ಗೈರು ಹಾಜರಿ ಮತದಾರರ ಮನೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಮತದಾರರಿಗೆ ನಮೂನೆ 12 ಡಿ ಯನ್ನು ವಿತರಿಸಿ, ನಂತರ ಮತದಾರರಿಂದ ನಮೂನೆ 12 ‘ಡಿ’ಯನ್ನು ಪಡೆಯಲಾಗುವುದು. ಈ ಉದ್ದೇಶಕ್ಕಾಗಿಯೇ ಪ್ರತ್ಯೇಕ ಪಟ್ಟಿ ತಯಾರಿಸಲಾಗುವುದು ಎಂದು ಅವರು ಹೇಳಿದರು.

‘ಸೆಕ್ಟರ್ ಅಧಿಕಾರಿಗಳು ನಮೂನೆ ‘12ಡಿ’ ಅರ್ಜಿಗಳನ್ನು ವಿತರಿ ಸುವ ಹಾಗೂ ಸಂಗ್ರಹಿಸುವ ಪ್ರಕ್ರಿಯೆ ಯನ್ನು ಮೇಲ್ವಿಚಾರಣೆ ಮಾಡಲಿ ದ್ದಾರೆ. ಈ ಎಲ್ಲಾ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ನೋಡಿಕೊಳ್ಳುತ್ತಾರೆ’ ಎಂದು ಅವರು ತಿಳಿಸಿದರು.

‘ಕೋವಿಡ್ ರೋಗಿಗಳು ಅಂಚೆ ಮತದಾನಕ್ಕಾಗಿ ನಮೂನೆ-12 ಡಿ ಅನ್ನು ಅನುಮೋದಿಸುವ ಮುಂಚೆ ಚುನಾವಣಾಧಿಕಾರಿಯು ಸಕ್ಷಮ ಪ್ರಾಧಿಕಾರವು ನೀಡಿದ ಪ್ರಮಾಣ ಪತ್ರ ಪರಿಶೀಲಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಬಿಜೆಪಿ ಮುಖಂಡ ಸತೀಶ್, ಜೆಡಿಎಸ್‌ನ ಗುಲಾಬಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬಾನಾ ಎಂ.ಶೇಕ್, ಚುನಾವಣಾ ತಹಶೀಲ್ದಾರ್ ರವಿಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.