ಗೋಣಿಕೊಪ್ಪಲು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದದಲ್ಲಿ ಪಾಲ್ಗೊಳ್ಳಲು ಅಂಬಾರಿ ಆನೆ ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ ಆನೆಗಳು ಭಾನುವಾರ ನಾಗರಹೊಳೆ ಮತ್ತಿಗೋಡು ಶಿಬಿರದಿಂದ ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಗೆ ಪ್ರಯಾಣ ಬೆಳೆಸಿದವು.
ಬೆಳಿಗ್ಗೆ ಮಾವುತರು ಆನೆಗಳನ್ನು ತೊಳೆದು ಸರಳವಾಗಿ ಶೃಂಗರಿಸಿದ್ದರು. ಮಧ್ಯಾಹ್ನ 3 ಗಂಟೆ ವೇಳೆಗೆ ಅವುಗಳಿಗೆ ಪೂಜೆ ಸಲ್ಲಿಸಿ ಶಿಬಿರದಿಂದ ಬೀಳ್ಕೊಡಲಾಯಿತು. ಅಭಿಮನ್ಯು ಆನೆ ಮಾವುತ ವಸಂತ, ಕಾವಾಡಿ ರಾಜು, ಗೋಪಾಲಸ್ವಾಮಿ ಆನೆಯ ಮಾವುತ ಗಣೇಶ್, ಕಾವಾಡಿ ಸೃಜನ್, ಅಶ್ವತ್ಥಾಮ ಆನೆಯ ಮಾವುತ ತಿಮ್ಮ, ಕಾವಾಡಿ ರಮೇಶ್ ಆನೆಯೊಂದಿಗೆ ಪ್ರಯಾಣ ಬೆಳೆಸಿದರು.
ಈ ಮೂರು ಆನೆಗಳು ಸೋಮವಾರ ಇತರ ಆನೆಗಳೊಂದಿಗೆ ಕೂಡಿಕೊಂಡು ಮೈಸೂರಿಗೆ ಪ್ರಯಾಣ ಬೆಳೆಸಲಿವೆ ಎಂದು ಮತ್ತಿಗೋಡು ಸಾಕಾನೆ ಶಿಬಿರದ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ತಿಳಿಸಿದರು.
ಸಾಕಾನೆ ಶಿಬಿರದ ಆನೆ ಮಾವುತರ ಮತ್ತು ಕಾವಾಡಿಗಳ ಕುಟುಂಬಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.