ADVERTISEMENT

ನದಿಮೂಲಗಳ ರಕ್ಷಣೆಗೆ ಒತ್ತು ಕೊಡಿ: ಶಾಸಕ ಎಂ.ಪಿ.ಅಪ್ಪಚ್ಚುರಂಜನ್

‘ಜೀವ ವೈವಿಧ್ಯ ಔಷಧ ಉದ್ಯಾನ’ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಅಪ್ಪಚ್ಚುರಂಜನ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 4:35 IST
Last Updated 18 ಮಾರ್ಚ್ 2023, 4:35 IST
ಹಾರಂಗಿಯಲ್ಲಿ ‘ಜೀವ ವೈವಿಧ್ಯ ಔಷಧ ಉದ್ಯಾನ’ ನಿರ್ಮಾಣಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿದರು. ಬಿ.ಎನ್.ಎನ್.ಮೂರ್ತಿ, ನಾಪಂಡ ರವಿಕಾಳಪ್ಪ, ಅನಿತಾ ಎಸ್. ಅರೇಕಲ್, ಶಿವರಾಂ ಬಾಬು, ಶರಣಬಸಪ್ಪ, ಎಂ.ಜೆ.ಗೋವರ್ಧನ್ ಸಿಂಗ್, ಎ.ಟಿ. ಪೂವಯ್ಯ ಇದ್ದಾರೆ
ಹಾರಂಗಿಯಲ್ಲಿ ‘ಜೀವ ವೈವಿಧ್ಯ ಔಷಧ ಉದ್ಯಾನ’ ನಿರ್ಮಾಣಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿದರು. ಬಿ.ಎನ್.ಎನ್.ಮೂರ್ತಿ, ನಾಪಂಡ ರವಿಕಾಳಪ್ಪ, ಅನಿತಾ ಎಸ್. ಅರೇಕಲ್, ಶಿವರಾಂ ಬಾಬು, ಶರಣಬಸಪ್ಪ, ಎಂ.ಜೆ.ಗೋವರ್ಧನ್ ಸಿಂಗ್, ಎ.ಟಿ. ಪೂವಯ್ಯ ಇದ್ದಾರೆ   

ಮಡಿಕೇರಿ: ‘ಪಶ್ಚಿಮಘಟ್ಟ ಪ್ರದೇಶದ ಅನೇಕ ನದಿಗಳಿಗೆ ಉಗಮ ಸ್ಥಾನವಾಗಿದೆ. ನದಿಮೂಲಗಳ ಸಂರಕ್ಷಣೆಗೆ ಎಲ್ಲರೂ ಒತ್ತು ನೀಡಬೇಕಾದ ಜರೂರು ಇದೆ’ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಅರಣ್ಯ ಇಲಾಖೆಯಿಂದ ಹಾರಂಗಿಯಲ್ಲಿ ನಿರ್ಮಿಸಲಿರುವ ‘ಜೀವ ವೈವಿಧ್ಯ ಔಷಧ ಉದ್ಯಾನ’ಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕೊಡಗಿನ ಪ್ರತಿ ಊರಿನಲ್ಲೂ ದೇವರ ಕಾಡುಗಳು ಇವೆ. ಈ ಕಾಡು ಗಳಲ್ಲೂ ಅಪಾರ ಔಷಧೀಯ ಗಿಡಗಳು, ಜೀವ ವೈವಿಧ್ಯಗಳಿವೆ. ಹಿಂದಿನಿಂದಲೂ ಆ ಕಾಡುಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಔಷಧ ಸಸ್ಯಗಳನ್ನು ಉಳಿಸುವ ಕಾರ್ಯ ನಿರಂತರವಾಗಿ ಆಗಬೇಕು. ನಮ್ಮ ಪರಿಸರ ಉಳಿದರೆ ಮಾತ್ರ ಜೀವರಾಶಿಗಳು ಬದುಕಲು ಸಾಧ್ಯ’ ಎಂದು ತಿಳಿಸಿದರು.

ADVERTISEMENT

‘ಮುಂದುವರೆದ ರಾಷ್ಟ್ರಗಳು ಆಯುರ್ವೇದ ಔಷಧಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಭಾರತದಿಂದ ಹೇರಳ ಪ್ರಮಾಣದಲ್ಲಿ ಆಯುರ್ವೇದ ಔಷಧಗಳು ವಿದೇಶಕ್ಕೆ ರಫ್ತಾಗುತ್ತಿವೆ. ಆಯುರ್ವೇದದಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಹೀಗಾಗಿ, ನಮ್ಮ ಪಾರಂಪರಿಕ ಔಷಧಗಳತ್ತ ನಾವು ಕೂಡ ಒಲವು ಹೊಂದಬೇಕು. ಔಷಧ ಗಿಡಮೂಲಿಕೆಗಳ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ‘ನಮ್ಮಲ್ಲಿರುವ ಔಷಧೀಯ ಸಸ್ಯಗಳು ಹಾಗೂ ಅವುಗಳ ಮಹತ್ವದ ಬಗ್ಗೆ ನಮಗೆ ತಿಳಿದಿಲ್ಲ. ಈ ಸಂಪತ್ತಿನ ಬಗ್ಗೆ ಜನರಿಗೆ ತಿಳಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ’ ಎಂದರು.

ಹಾರಂಗಿ ಜಲಾಶಯ, ಆನೆ ಶಿಬಿರ, ವೃಕ್ಷೋದ್ಯಾನಕ್ಕೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ. ಮುಂದಿನ ದಿನದಲ್ಲಿ ಔಷಧ ಉದ್ಯಾನ ನಿರ್ಮಾಣಗೊಂಡ ಬಳಿಕ ಪ್ರವಾಸಿಗರು ಅದರ ಲಾಭವನ್ನೂ ಪಡೆಯಬಹುದು. ಉದ್ಯಾನ ನಿರ್ವಹಣೆಗೆ ಅರಣ್ಯ ಇಲಾಖೆ, ಸ್ಥಳೀಯ ಪಂಚಾಯಿತಿ ಆಸಕ್ತಿ ವಹಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಔಷಧಿಯ ಉದ್ಯಾನ ನಿರ್ಮಾಣಕ್ಕೆ ಯೋಜನೆ ಜಾರಿಯಾಗಬೇಕು’ ಎಂದು ಹೇಳಿದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಅನಿತಾ ಎಸ್. ಅರೇಕಲ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಂ ಬಾಬು, ಶರಣಬಸಪ್ಪ, ಎಂ.ಜೆ.ಗೋವರ್ಧನ್ ಸಿಂಗ್, ಎ.ಟಿ. ಪೂವಯ್ಯ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಲ್ಯಾಂಪ್ಸ್ ಅಧ್ಯಕ್ಷ ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.