ADVERTISEMENT

ಭಾಗ್ಯಗಳನ್ನು ಕೊಟ್ಟೆ ಎನ್ನುವ ಸಿದ್ದರಾಮಯ್ಯನವರಿಗೆ ಕ್ಷೇತ್ರಭಾಗ್ಯವೇ ಇಲ್ಲ: ಸಿಂಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 12:29 IST
Last Updated 23 ಮಾರ್ಚ್ 2023, 12:29 IST
   

ಮಡಿಕೇರಿ: ಎಲ್ಲಾ ಭಾಗ್ಯಗಳನ್ನು ಕೊಟ್ಟೆ ಎನ್ನುವ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಭಾಗ್ಯವೇ ಇಲ್ಲ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಇದನ್ನು ನೋಡಿದರೆ ಬಹಳ ಆಶ್ಚರ್ಯ ಮತ್ತು ಸೋಜಿಗವೂ ಆಗುತ್ತದೆ. ಒಂದು ಕ್ಷೇತ್ರವನ್ನು ಹುಡುಕಿಕೊಳ್ಳಬೇಕಾದ ಸ್ಥಿತಿ ಸಿದ್ದರಾಮಯ್ಯನವರಿಗೆ ಬಂದಿದೆ ಎಂದರೆ, ಅವರ ಈ ಭಾಗ್ಯಗಳಿಗೆ ಜನ ಯಾವುದೇ ಬೆಲೆ ಕೊಟ್ಟಿಲ್ಲ. ಅವರಿಗೆ ಇಂತಹ ಸ್ಥಿತಿ ಬಂದಿದೆ ಎಂದರೆ ಜನರಿಗೆ ಇವರ ಮೇಲೆ ಯಾವುದೇ ವಿಶ್ವಾಸ ಇಲ್ಲ ಎಂದರ್ಥ ಎಂದು ಇಲ್ಲಿ‌ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ನಾನು ಈಗಲೂ ಹೇಳುತ್ತೇನೆ ಅವರು ಕೊನೆಗೆ ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಾರೆ. ಹೀಗಾಗಿ ಕರ್ನಾಟಕದ ಜನ ಇವರ ಮಾತಿಗೆ ಮರುಳಾಗಿ ಮಂಗಗಳಾಗಬಾರದು ಎಂದರು.

ADVERTISEMENT

ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಚಿಂತೆ, ರೇವಣ್ಣ‌ ಅವರಿಗೆ ಭವಾನಿಯವರ ಚಿಂತೆ. ಕುಮಾರಣ್ಣನಿಗೆ ನಿಖಿಲ್ ಕುರಿತು ಚಿಂತೆ ಹೀಗಾಗಿ ಇವರಿಗೆಲ್ಲ ಅವರವರ ಕುಟುಂಬಗಳ ಚಿಂತೆ ಇದೆ. ಇವರಿಗೆ ರಾಜ್ಯದ ಚಿಂತೆ ಇದೆ ಎಂದು ತಿಳಿದು ಯಾರೂ‌ ಮಂಗಗಳಾಗಬಾರದು ಎಂದು ಹೇಳಿದರು.

ಕಾಂಗ್ರೆಸ್ ಅವರು 200 ಯುನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ ₹ 2,000 ಕೊಡುತ್ತೇವೆ ಎಂದು ಹೇಳಿರುವುದನ್ನು ನಂಬಬಾರದು. ಪಂಜಾಬ್ ನಲ್ಲಿ ಎಎಪಿಯವರು ಇದನ್ನೇ ಹೇಳಿ ಟೋಪಿ ಹಾಕಿದ್ದಾರೆ.

ಈಗ ಕಾಂಗ್ರೆಸ್ ಅವರು ರಾಜ್ಯದ ಜನರಿಗೆ ಟೋಪಿ ಹಾಕಲು ಹೋರಟಿದ್ದಾರೆ. ಒಂದು ವೇಳೆ ಬಿಜೆಪಿಯೆ ಈ ಬಗೆಯಲ್ಲಿ ಸುಳ್ಳು ಹೇಳಿ ಮತಯಾಚಿಸಿದರೂ ಸಾರ್ವಜನಿಕರು ಮತ ನೀಡಬಾರದು ಎಂದು ಮನವಿ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.