ADVERTISEMENT

ಕೊಡಗು, ಹಾಸನದಲ್ಲಿ ಇಳಿದ ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:30 IST
Last Updated 16 ಜುಲೈ 2021, 19:30 IST
ಮೈಸೂರು ಜಿಲ್ಲೆ ಚುಂಚನಕಟ್ಟೆಯಲ್ಲಿರುವ ಧನುಷ್ಕೋಟಿ ಜಲಪಾತದ ಮನೋಹರ ದೃಶ್ಯ
ಮೈಸೂರು ಜಿಲ್ಲೆ ಚುಂಚನಕಟ್ಟೆಯಲ್ಲಿರುವ ಧನುಷ್ಕೋಟಿ ಜಲಪಾತದ ಮನೋಹರ ದೃಶ್ಯ   

ಮಡಿಕೇರಿ/ಹಾಸನ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆಯ ಅಬ್ಬರ ತಗ್ಗಿದ್ದು, ಬಿಡುವು ಕೊಟ್ಟು ಅಲ್ಲಲ್ಲಿ ಉತ್ತಮ ಮಳೆ ಸುರಿದಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ಕಾವೇರಿ ನದಿಯಲ್ಲೂ ನೀರಿನಮಟ್ಟ ಸ್ವಲ್ಪ ಇಳಿಕೆಯಾಗಿದೆ.

ಹಾಸನ ಜಿಲ್ಲೆಯಲ್ಲೂ ಮಳೆ ಆರ್ಭಟ ಕಡಿಮೆಯಾಗಿದೆ. ಸಕಲೇಶಪುರ ಮತ್ತು ಆಲೂರುತಾಲ್ಲೂಕಿನಲ್ಲಿ ಕಾಫಿ, ಅಡಿಕೆ ತೋಟ ಜಲಾವೃತಗೊಂಡಿದ್ದು, ಬೆಳೆ ನಷ್ಟದ ಭೀತಿ ಎದುರಾಗಿದೆ. ಬಿರುಗಾಳಿಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ. ಯಸಳೂರು ಹೋಬಳಿ ಚಂಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆಯೊಂದು ಕುಸಿದು ಬಿದ್ದಿದೆ.

ಜಲಾನಯನ ಪ್ರದೇಶದಲ್ಲಿ ಜೋರು ಮಳೆಯಿಂದಾಗಿ ಹೇಮಾವತಿ ಜಲಾಶಯದ ಒಳಹರಿವು ಏರಿದೆ. ಜಿಟಿಜಿಟಿ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಸ್ಥಗಿತೊಂಡಿದೆ. ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ಹೊರ ಬಿಟ್ಟಿರುವುದರಿಂದ ರಾಮನಾಥಪುರದಲ್ಲಿ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ADVERTISEMENT

ಒಳಹರಿವು ಹೆಚ್ಚಳ: ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಮಂಡ್ಯ ಜಿಲ್ಲೆ ಕೆಆರ್‌ಎಸ್‌ ಜಲಾಶಯದ ಒಳಹರಿವಿನ ಪ್ರಮಾಣ 22,027 ಕ್ಯುಸೆಕ್‍ಗೆ ಹೆಚ್ಚಿದೆ.

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ 19,190 ಕ್ಯುಸೆಕ್‍ಗೆ ಹೆಚ್ಚಿದೆ. ಮುನ್ನೆಚ್ಚರಿಕೆ ಕ್ರಮವಾಗಿ 15,000 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ.

ಬೆಟ್ಟದಪುರ ಸಮೀಪದ ರಾಜನಬಿಳುಗೂಲಿ ಗ್ರಾಮದಲ್ಲಿ ಗುರುವಾರ ಸಂಜೆ ಬಿದ್ದ ಮಳೆಗೆ, ಉಮೇಶ್ ಎಂಬುವರ ಮನೆಯ ಚಾವಣಿ ಹಾಗೂ ಗೋಡೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.