ಕಲಬುರಗಿ: ‘ವಿಶ್ವವಿದ್ಯಾಲಯಗಳು ಪ್ರಗತಿ ಹೊಂದಬೇಕಾದರೆ ಸಂಶೋಧನೆಗಳು ಅನಿವಾರ್ಯ ಹಾಗೂ ಅವಶ್ಯಕ. ಹೊಸ ಆವಿಷ್ಕಾರ, ಆಧುನಿಕ ತಂತ್ರಜ್ಞಾನಗಳ ತಿಳುವಳಿಕೆಗೆ ಸಂಶೋಧನೆಗಳೇ ಮಾರ್ಗ’ ಎಂದು ಕೆಬಿಎನ್ ವಿ.ವಿ.ಯ ಕುಲಸಚಿವೆ ಡಾ.ರುಕ್ಸರ್ ಫಾತಿಮಾ ನುಡಿದರು.
ಕೆಬಿಎನ್ ವಿ.ವಿ.ಯ ಗಣಿತ ಹಾಗೂ ಭೌತವಿಜ್ಞಾನ ವಿಭಾಗಗಳ ಸಹಯೋಗದಲ್ಲಿ ಕೆಬಿಎನ್ ವೈದ್ಯಕೀಯ ನಿಕಾಯದ ಏನೋಟೊಮಿ ಆಡಿಟೊರಿಯಂನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಖಗೋಳ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಅನ್ವಯಿಕ ಗಣಿತದ ಕುರಿತು ರಾಜ್ಯ ಮಟ್ಟದ ಅಂತರ ಶಿಸ್ತಿನ ಸಂಶೋಧನಾ ಕಾರ್ಯಾಗಾರ‘ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಗರದ ಕೆಬಿಎನ್ ವಿ.ವಿ.ಯು ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಪ್ರಾಧ್ಯಾಪಕರು ಪಠ್ಯವನ್ನು ಪೂರ್ಣಗೊಳಿಸುವುದವರ ಜೊತೆಗೆ ವಿದ್ಯಾರ್ಥಿಗಳನ್ನು ಸಂಶೋಧನೆಯಲ್ಲಿ ತೊಡಗಿಸಬೇಕು. ಅಲ್ಲದೇ ಹೊಸ ಹೊಸ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಅರ್ಥೈಸಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್ ಡಾ. ದೀಪಕ್ ಸ್ಯಾಮುವೆಲ್, ಡೇಟಾ ವಿಜ್ಞಾನ ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿದೆ. ನಮ್ಮ ದಿನಚರಿಯಲ್ಲಿ ಡೇಟಾ ವಿಜ್ಞಾನ ಅನೇಕ ಅನುಕೂಲಗಳನ್ನು ಒದಗಿಸಿದೆ ಎಂಬುದನ್ನು ವಿವಿಧ ಉದಾಹರಣೆಗಳೊಂದಿಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಬಿಎನ್ ವಿ.ವಿ.ಯ ಕಲಾ, ಭಾಷಾ, ಮಾನವಿಕತೆ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ನಿಕಾಯದ ಡೀನ್ ಡಾ. ನಿಶಾತ್ ಆರೀಫ್ ಹುಸೇನಿ, ಬಾಹ್ಯಕಾಶದ ಆವಿಷ್ಕಾರಗಳಲ್ಲಿ ಡೇಟಾ ವಿಜ್ಞಾನ, ಗಣಿತ ಮತ್ತು ಖಗೋಳ ಭೌತಶಾಸ್ತ್ರಗಳು ಬಹುಮುಖ್ಯ ಪಾತ್ರವಹಿಸುತ್ತವೆ. ವಿಶ್ವವನ್ನು ಅರಿಯಲು ಜಾಗತಿಕ ಮಟ್ಟದಲ್ಲಿ ಬಾಹ್ಯಕಾಶ ಸಂಶೋಧನೆಗಳು ಜರಗುತ್ತಿವೆ ಎಂದು ಹೇಳಿದರು.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ಪ್ರೊ. ಎಸ್.ಎನ್. ಹಸನ್ ಉಪನ್ಯಾಸ ನೀಡಿದರು.
ಅದೇ ವಿ.ವಿ.ಯ ಭೌತ ವಿಜ್ಞಾನ ವಿಭಾಗದ ಪ್ರೊ. ಪ್ರಿಯಾ ಹಸನ್ ವಿಶ್ವ ವೀಕ್ಷಣೆ ಮತ್ತು ಬಾಹಿರಗ್ರಹಗಳ ಬಗ್ಗೆ ಉಪನ್ಯಾಸ ನೀಡಿದರು.
ವಿದ್ಯಾರ್ಥಿನಿ ಜೊಹರಾ ಬೇಗಂ ಪ್ರಾರ್ಥಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸಯ್ಯದ್ ಅಬ್ರಾರ್ ಸ್ವಾಗತಿಸಿದರೆ, ಭೌತ ವಿಜ್ಞಾನ ವಿಭಾಗದ ಮುಖಸ್ಥೆ ಡಾ. ನಾಝಿಯಾ ಪರ್ವೀನ್ ಅತಿಥಿಗಳನ್ನ ಪರಿಚಯಿಸಿದರು. ಗಣಿತ ವಿಭಾಗದ ಅತಿಥಿ ಉಪನ್ಯಾಸಕಿ ಡಾ.ಸೀಮಾ ಜಬೀನ್ ಕಾರ್ಯಾಗಾರದ ಕುರಿತು ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಸನಾ ಏಜಾಜ್ ವಂದಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಜಾವುದ್ದೀನ್ ಸಫಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.