ADVERTISEMENT

‘ರಾಜ್ಯ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ’: ಡಿವಿ ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 14:11 IST
Last Updated 25 ಆಗಸ್ಟ್ 2021, 14:11 IST
ಡಿ.ವಿ.ಸದಾನಂದ ಗೌಡ
ಡಿ.ವಿ.ಸದಾನಂದ ಗೌಡ   

ಕುಶಾಲನಗರ: ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಖಾತೆ ವಿಚಾರಕ್ಕೆ ಇದ್ದ ಮುನಿಸು ಶಮನವಾಗಿದೆ. ಹೀಗಾಗಿಸರ್ಕಾರ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.

ಸಮೀಪದ ಗುಡ್ಡೆಹೊಸೂರು ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಬಗ್ಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಸರಿಯಲ್ಲ. ಕಾಂಗ್ರೆಸ್ ಎಂಬ ಹಡಗು ಸಮುದ್ರದ ಮಧ್ಯದಲ್ಲಿ ಸಿಲುಕಿ ಗಿರಗಿರನೇ ತಿರುಗುತ್ತಿದೆ. ಅದಕ್ಕೆ ಸಿದ್ದರಾಮಯ್ಯ ಅವರ ತಲೆ ತಿರುಗುತ್ತಿದೆ ಎಂದು ಸದಾನಂದಗೌಡ ಲೇವಡಿ ಮಾಡಿದರು.

‘ಸಿದ್ದರಾಮಯ್ಯ ಅವರಿಗೆ ಗೂಟದ ಕಾರು ಬೇಕಾಗಿತ್ತು. ಇದಕ್ಕಿಂತ ದೊಡ್ಡ ಹುದ್ದೆ ತನಗೆ ಸಿಗುವುದಿಲ್ಲ ಎನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತಾಗಿತ್ತು. ಹೀಗಾಗಿ ಅವರ ಮನಸ್ಸಿನಲ್ಲಿದ್ದ ಕೆಲಸಗಳೆಲ್ಲವೂ ಈಡೇರುತ್ತಿದ್ದಂತೆ ಕುಮಾರಸ್ವಾಮಿ ಅವರ ರಾಜೀನಾಮೆ ಕೊಡಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಅಸಮಾಧಾನಗೊಂಡವರೆಲ್ಲಾ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಸಹಕಾರ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅದನ್ನು ಮತ್ತಷ್ಟು ಬಲಗೊಳಿಸುವ ಕೆಲಸ ಮಾಡಲಾಗುತ್ತದೆ’ ಎಂದು ಡಿ.ವಿ.ಸದಾನಂದಗೌಡ ಹೇಳಿದರು.

ADVERTISEMENT

ಕಾನೂನು ಪ್ರಕಾರ ಕ್ರಮಕೈಗೊಳ್ಳಲಿ: ಕನ್ನಡ ಚಿತ್ರರಂಗದ ನಾಯಕಿಯರಾದ ಸಂಜನಾ ಗರ್ಲಾನಿ ಮತ್ತು ರಾಗಿಣಿ ಅವರು ಡ್ರಗ್ಸ್ ತೆಗೆದುಕೊಂಡಿರುವುದಕ್ಕೆ ಪ್ರತಿಕ್ರಿಯಿಸಿರುವ ಸದಾನಂದಗೌಡ ಅವರು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾನೂನು ಸ್ವತಂತ್ರವಾಗಿ ಕ್ರಮ ಕೈಗೊಳ್ಳಲಿ. ಯಾವ ಸೆಕ್ಷನ್‌ಗಳ ಮೇಲೆ ಕ್ರಮಕೈಗೊಳ್ಳುವುದೋ ಕೈಗೊಳ್ಳಲಿ. ಇದರಿಂದ ಉಳಿದವರಿಗೂ ಒಂದು ಎಚ್ಚರಿಕೆ ಗಂಟೆಯಾಗುತ್ತದೆ. ಡ್ರಗ್ಸ್ ಜಾಲದಲ್ಲಿ ಸಿಲುಕಿದರೆ ಎಂತಹ ಶಿಕ್ಷೆ ಆಗುತ್ತದೆ ಎನ್ನುವ ಅರಿವು ಮೂಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.