ಮಡಿಕೇರಿ: ಮಡಿಕೇರಿಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಹೆಬ್ಬಲಸು ಮರದ ತುಂಡುಗಳನ್ನು ಸಾಗಣೆ ಮಾಡುತ್ತಿದ್ದ ಆರೋಪಿ ಮಹಮ್ಮದ್ ಸಫ್ಯಾನ್ (26) ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳೂರು ತಾಲ್ಲೂಕಿನ ಮಂಜನಾಡಿ ಗ್ರಾಮದ ನಿವಾಸಿಯಾದ ಆರೋಪಿಯು ಭಾನುವಾರ ರಾತ್ರಿ ಹೆಬ್ಬಲಸನ್ನು ಸಾಗಿಸುತ್ತಿದ್ದ ವೇಳೆ ಸಂಪಾಜೆ ಅರಣ್ಯ ತನಿಖಾ ಠಾಣೆ ಬಳಿ ಬಂಧಿಸಲಾಯಿತು.
ಆರೋಪಿಯಿಂದ ಲಾರಿ ಮತ್ತು ಹೆಬ್ಬಲಸು ಮರದ 12 ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ. ಉಪವಲಯ ಅರಣ್ಯಾಧಿಕಾರಿ ಬಸವರಾಜಪ್ಪ ಈ ಪ್ರಕರಣ ಪತ್ತೆ ಹಚ್ಚಿದರು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೊಯಿಷಿನ್ ಬಾಷಾ ಹಾಗೂ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಉಪ ವಲಯ ಅರಣ್ಯಾಧಿಕಾರಿ ವಿನಯಕೃಷ್ಣ, ಗಸ್ತು ಅರಣ್ಯಪಾಲಕರಾದ ಎಸ್.ನಾಗರಾಜ್, ಕಾರ್ತಿಕ್, ವಾಹನ ಚಾಲಕರಾದ ಶಿವಪ್ರಸಾದ್, ಮನೋಜ್ ಕಾರ್ಯಾಚರಣೆ ತಂಡದಲ್ಲಿದ್ದರು.
ಬೇಟೆಗೆ ಯತ್ನ: ಒಬ್ಬನ ಬಂಧನ
ಇಲ್ಲಿನ ತಲಕಾವೇರಿ ವನ್ಯಜೀವಿ ವಲಯದ ಪದಿನಾಲ್ಕನಾಡು ಮೀಸಲು ಅರಣ್ಯಕ್ಕೆ ಕೇರಳ ಭಾಗದಿಂದ ನಾಲ್ವರು ಬೇಟೆಗಾರರು ನುಸುಳಿದ್ದರು. ಇವರ ಮೇಲೆ ಚಾಂದೆಟ್ಟುಕೊಲ್ಲಿ ಗಸ್ತು ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳ ತಂಡ ದಾಳಿ ಒಬ್ಬ ಆರೋಪಿಯನ್ನು ಬಂಧಿಸಿ, 2 ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.
ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ತಲಕಾವೇರಿ ವನ್ಯಜೀವಿ ವಲಯದ ಕೆ.ಕೊಟ್ರೇಶ್, ಉಪ ವಲಯ ಅರಣ್ಯಾಧಿಕಾರಿ ಕೆ.ಕೆ.ಆನಂದ, ಗಸ್ತು ವಲಯಪಾಲಕ ಬಿ.ಎಂ.ಯತೀಶ, ಗಸ್ತು ವನಪಾಲಕ ಕೆ.ಎಂ.ಸುಬ್ರಮಣಿ ಹಾಗೂ ಬೇಟೆ ತಡೆ ಶಿಬಿರದ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.