ADVERTISEMENT

ಯುವಶಕ್ತಿ ಚುನಾವಣೆಗೆ ದಿಕ್ಸೂಚಿ: ನಿಖಿಲ್‌

ಕಾರ್ಯಕರ್ತರ ಮೇಲೆ ಶಾಸಕರ ದೌರ್ಜನ್ಯ: ನಿಖಿಲ್‌ ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 5:54 IST
Last Updated 21 ಮಾರ್ಚ್ 2023, 5:54 IST
ಬಂಗಾರಪೇಟೆಯಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು
ಬಂಗಾರಪೇಟೆಯಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು   

ಬಂಗಾರಪೇಟೆ: ‘ಕ್ಷೇತ್ರದಲ್ಲಿ ಯುವ ಶಕ್ತಿಯ ಸಂಘಟನೆಗೆ ಮಲ್ಲೇಶ್‌ ಬಾಬು ಆದ್ಯತೆ ನೀಡಿದ್ದಾರೆ. ಇದನ್ನು ಸಹಿಸದೆ ಅವರ ಮೇಲೆ ದೌರ್ಜನ್ಯ ನಡೆಸುವುದನ್ನು ಶಾಸಕ ಎಸ್.ಎನ್. ನಾರಾಯಣಸ್ವಾಮಿ ನಿಲ್ಲಿಸಬೇಕು’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು.

ಪಟ್ಟಣದ ಕಾರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಶ್ಯಾಂ ಆಸ್ಪತ್ರೆ ಮುಂಭಾಗ ಸೋಮವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಇಲ್ಲಿ ಸೇರಿರುವ ಯುವಶಕ್ತಿಯೇ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದರು.

ಶಾಸಕರ ಕೂಗಾಟ, ಬೆದರಿಕೆಗೆ ಯುವಶಕ್ತಿ ಜಗ್ಗುವುದಿಲ್ಲ. ಮಲ್ಲೇಶ್ ಬಾಬು ಅವರನ್ನು ಎಷ್ಟೇ ಬೆದರಿಸಿದರು ಅವರು ಹಿಂಜರಿಯುವುದಿಲ್ಲ. ನಿತ್ಯ ನಮ್ಮ ಶಕ್ತಿ ಹೆಚ್ಚುತ್ತಲೇ ಇದೆ. ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. 75 ವರ್ಷದಲ್ಲಿ ದೇಶವನ್ನಾಳುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯ ಸರ್ಕಾರ ನಿರುದ್ಯೋಗ ಸೃಷ್ಟಿಸುವಲ್ಲಿ ಸಾಧನೆ ಮಾಡಿವೆ ಎಂದು ವ್ಯಂಗ್ಯವಾಡಿದರು.

ADVERTISEMENT

ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್‌ ಸಂಯುಕ್ತ ಸರ್ಕಾರದಲ್ಲಿ ಕಾಂಗ್ರೆಸ್ಸಿಗರ ಕಿರುಕುಳ ತಾಳಲಾರದೆ ಬೇಸತ್ತು ಸರ್ಕಾರವನ್ನು ಕೈಬಿಡಲಾಯಿತು. ಆದಾಗ್ಯೂ ಸಿಕ್ಕಿದ ಅಲ್ಪ ಸಮಯದಲ್ಲಿ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ಅವರು ರೈತರು ಮತ್ತು ಮಹಿಳೆಯರ ಪರ ನಿಂತರು ಎಂದರು.

ರೈತರು, ಕೂಲಿ ಕಾರ್ಮಿಕರ ಹಣ ತೆರಿಗೆ ರೂಪದಲ್ಲಿ ಈಗ ಸರ್ಕಾರ ನಡೆಸುತ್ತಿರುವ ಲೂಟಿಕೋರರ ಕೈ ಸೇರುತ್ತಿದೆ. ಬಿಜೆಪಿ 40 ಪರ್ಸೆಂಟ್ ಕಮಿಷನ್ ದಂಧೆಗೆ ಇಳಿದಿದೆ ಎಂದು ಟೀಕಿಸಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯನ್ನು ತರಾತುರಿಯಲ್ಲಿ ಉದ್ಘಾಟಿಸಿದರು. ಎಲ್ಲಿಗೆ ಹೋದರೂ ₹ 270 ಟೋಲ್ ಶುಲ್ಕ ಕಟ್ಟಬೇಕಾ? ಈ ರಸ್ತೆ ಶ್ರೀಮಂತರಿಗೋಸ್ಕರ ನಿರ್ಮಿಸಲಾಗಿದೆಯೇ? ಸ್ವಚ್ಛ ಭಾರತ್ ಎನ್ನುವ ನೀವು ಶೌಚಾಲಯ ನಿರ್ಮಿಸಿದ್ದೀರ? ಎಂದು ಪ್ರಶ್ನಿಸಿದರು.

‘ಶಾಸಕರು ತಾಲ್ಲೂಕಿನ ಯುವಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅದೇ ಯುವಕರ ಸಹಾಯದಿಂದ ನಾನು ಕ್ಷೇತ್ರದಲ್ಲಿ ಜೆಡಿಎಸ್ ಬಾವುಟ ಹಾರಿಸುತ್ತೇನೆ. ಯುವಕರ ಮೇಲೆ ದೌರ್ಜನ್ಯ ಮುಂದುವರಿದರೆ ಯುವ ಶಕ್ತಿ ಏನೆಂದು ತೋರಿಸುತ್ತೇನೆ’ ಎಂದು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರು ಶಾಸಕರ ವಿರುದ್ಧ ಗುಡುಗಿದರು.

ಹಿರಿಯರ ಮಾರ್ಗದರ್ಶನ ಮತ್ತು ಯುವ ಶಕ್ತಿಯಿಂದ ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲಿದ್ದೇವೆ. ಪಕ್ಷಕ್ಕೆ ತಾಲ್ಲೂಕಿನ ಯುವಕರೇ ಶಕ್ತಿ. ಕೇವಲ ಒಂದು ಫೋನ್‌ ಕರೆ ಮಾಡಿ ಸಮಾವೇಶ ಇದೆ ಎಂದು ಹೇಳಿದ್ದಕ್ಕೆ ಎರಡು ಸಾವಿರಕ್ಕೂ ಹೆಚ್ಚು ಯುವಕರು ಸೇರಿದ್ದಾರೆ ಎಂದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಎಂಎಲ್‌ಸಿ ಇಂಚರ ಗೋವಿಂದರಾಜು, ಚೌಡರೆಡ್ಡಿ, ಬನಕನಹಳ್ಳಿ ನಟರಾಜ್, ತಾಲ್ಲೂಕು ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ದೇವರಾಜ್, ಪುರಸಭಾ ಸದಸ್ಯ ವೈ. ಸುನಿಲ್ ಕುಮಾರ್, ವೆನ್ನಲ, ಮಂಗಮ್ಮ ಮುನಿಸ್ವಾಮಿ, ಮುಖಂಡರಾದ ಎ. ಶ್ರೀನಿವಾಸ್, ಮಾಲೂರು ಜೆಡಿಎಸ್ ಅಭ್ಯರ್ಥಿ ರಾಮೇಗೌಡ, ಮುಳಬಾಗಿಲು ಅಭ್ಯರ್ಥಿ ಸಮೃದ್ದಿ ಮಂಜುನಾಥ್, ಇರಗಸಂದ್ರ ವಿಶ್ವನಾಥ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.