ADVERTISEMENT

ತಾತನ ಹೆಸರು ಹೇಳಿದರೆ ನಾಯಕರಾಗಲ್ಲ: ತೇಜಸ್ವಿ ಸೂರ್ಯ

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಯುವ ಸಂಕಲ್ಪ ಸಮಾವೇಶ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 13:24 IST
Last Updated 21 ಮಾರ್ಚ್ 2023, 13:24 IST
ಗಂಗಾವತಿಯಲ್ಲಿ ಪ್ರಚಾರ ನಡೆಸಿದ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ
ಗಂಗಾವತಿಯಲ್ಲಿ ಪ್ರಚಾರ ನಡೆಸಿದ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ   

ಗಂಗಾವತಿ: ಜನನ ಪ್ರಮಾಣಪತ್ರ, ತಂದೆ–ತಾಯಿ ಹಾಗೂ ತಾತನ ಹೆಸರು ಹೇಳಿಕೊಂಡು ಓಡಾಡಿದರೆ ಇಲ್ಲಿ ನಾಯಕರಾಗುವುದಿಲ್ಲ. ಜನರ ಆಶೀರ್ವಾದ, ಜನ ಕೊಡುವ ನಡತೆ ಪ್ರಮಾಣಪತ್ರ ಮತ್ತು ಸ್ವಯಂ ಕೃಷಿಯಿಂದ ಮಾತ್ರ ನಾಯಕರಾಗಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಯುವ ಸಂಕಲ್ಪ ಸಮಾವೇಶದಲ್ಲಿ ಮಾತಿನುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

‘ಗಂಗಾವತಿ ರಾಜ್ಯಕ್ಕೆ ಅನ್ನ ನೀಡುವ ಕೇಂದ್ರ. ಹಿಂದುತ್ವದ ಭದ್ರಕೋಟೆ, ಹನುಮನ ಜನ್ಮಸ್ಥಳ. ರಾಮಾಯಣದ ಕೇಂದ್ರ ಬಿಂದು. ಅಯೋಧ್ಯ ರಾಮ ಮಂದಿರದಂತೆ, ಭತ್ತದನಾಡಿನ ಅಂಜನಾದ್ರಿ ಅಭಿವೃದ್ಧಿ ಬಿಜೆಪಿಯಿಂದಲೇ ನಡೆಯುತ್ತಿದ್ದು, ಈಗಾಗಲೇ ₹120 ಕೋಟಿ ಬಿಡುಗಡೆ ಮಾಡಿ, ಕಾಮಗಾರಿಗೆ ಪೂಜೆ ನಡೆಸಲಾಗಿದೆ ಎಂದು ಹೇಳಿದರು.

ADVERTISEMENT

ಬಿಜೆಪಿ ಸರ್ಕಾರ ಉಚಿತ ವೈದ್ಯಕೀಯ ಚಿಕಿತ್ಸೆಗೆ ಆಯುಷ್ಮಾನ್ ಭಾರತ ಯೋಜನೆ ನೀಡಿದ್ದು, ಗಂಗಾವತಿ ಕ್ಷೇತ್ರದಲ್ಲಿ 24,533 ಫಲಾನುಭವಿಗಳಿದ್ದಾರೆ. ಇಲ್ಲಿ ಜೆಜೆಎಂ ಯೋಜನೆಯಡಿ 33,500 ಮನೆಗಳಿಗೆ ನೀರು ಪೂರೈಸಲಾಗಿದೆ ಎಂದರು.

ರಾಜ್ಯ ಎಸ್‌ಸಿ ಮೋರ್ಚಾದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ರಾಜ್ಯದಲ್ಲಿ ಮೂರು ಪ್ರಮುಖ ಪಕ್ಷಗಳಿದ್ದು, ಬಿಜೆಪಿ ದೇಶ ಮತ್ತು ಜನರ ಭದ್ರತೆಗೆ ಆಡಳಿತ ನೀಡುವಂತೆ ಕೇಳಿದರೆ, ಕಾಂಗ್ರೆಸ್‌ ಪಕ್ಷದವರು ರಾಗಿ, ಅಕ್ಕಿ, ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎನ್ನುತ್ತಾರೆ. ಇನ್ನೂ ಜೆಡಿಎಸ್ ನಾವು ಸತ್ತುಹೋಗುತ್ತಿದ್ದೇವೆ. ಹೃದಯ ನಿಂತು ಹೋಗುತ್ತಿದೆ. ಕೊನೆಯ ಅವಕಾಶ ನೀಡಿ ಎನ್ನುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಯುವಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಕೆ.ಸಿ ಸಂದೀಪ್ ಕುಮಾರ, ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಾಯಿನಗರದಿಂದ ಬೈಕ್ ರ‍್ಯಾಲಿ ನಡೆಸಿದರು. 500ಕ್ಕೂ ಹೆಚ್ಚು ದಿಚಕ್ರ ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಕನಕಗಿರಿ ಶಾಸಕ ಬಸವರಾಜ ದಢೇಸೂಗುರು, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಮುಖಂಡರಾದ ನೆಕ್ಕಂಟಿ ಸೂರಿಬಾಬು, ಗಿರೇಗೌಡ, ವಿರೂಪಾಕ್ಷಪ್ಪ ಸಿಂಗನಾಳ, ಜಿ. ವೀರಪ್ಪ, ರಾಘವೇಂದ್ರ ಶ್ರೇಷ್ಠಿ, ಸಂತೋಷ ಕೆಲೋಜಿ, ಶಿವಕುಮಾರ ಅರಿಕೇರಿ, ಅರ್ಜುನ ರಾಯ್ಕರ, ವೆಂಕಟೇಶ ಅಮರಜ್ಯೋತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.