ADVERTISEMENT

ಕೊಪ್ಪಳ: ಮತದಾರರಿಗೆ ಬೋರ್‌ವೆಲ್ ಕೊಡುಗೆ, KRPP ಪಕ್ಷದ ಜಿಲ್ಲಾಧ್ಯಕ್ಷರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 11:51 IST
Last Updated 21 ಮಾರ್ಚ್ 2023, 11:51 IST
   

ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿ ವಿಧಾನಸಭಾ ಕ್ಷೇತ್ರದ ಮತದಾರರನ್ನು ಸೆಳೆಯಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಟು ಬೋರ್‌ವೆಲ್‌ಗಳನ್ನು ಕೊರೆಯಿಸಿದ್ದು, ಇದಕ್ಕೆ ಬೇರೆ ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದ್ದರಿಂದ ಚುನಾವಣಾಧಿಕಾರಿ ಕಾರಣ ಕೇಳಿ ಕೆಆರ್‌ಪಿಪಿ ಪಕ್ಷದ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಜನಾರ್ದನ ರೆಡ್ಡಿ ಸ್ಥಾಪಿಸಿದ ಪಕ್ಷ ಸ್ಪರ್ಧೆ ಖಚಿತಪಡಿಸಿದ ಕ್ಷೇತ್ರಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಿಸಲಾಗುತ್ತಿದೆ. ಬೋರ್‌ವೆಲ್‌ ವಾಹನದಲ್ಲಿ ಪಕ್ಷದ ಬ್ಯಾನರ್‌ ಕಟ್ಟಿಕೊಂಡು ಓಡಾಡಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮನೋಹರಗೌಡ ‘ಬೇಸಿಗೆ ಸಮಯದಲ್ಲಿ ನೀರಿಗೆ ಹಾಹಾಕಾರ ಎದುರಾಗಿರುವ ಕಾರಣ ರೆಡ್ಡಿ ಅಭಿಮಾನಿಗಳು ಬೋರ್‌ವೆಲ್‌ ಕೊರೆಯಿಸಿದ್ದಾರೆ. ಪಕ್ಷದಿಂದ ಮಾಡಿದ ಕೆಲಸ ಇದಲ್ಲ. ಶಾಸಕ ಪರಣ್ಣ ಮುನವಳ್ಳಿ ಗಂಗಾವತಿ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ. ಆದ್ದರಿಂದ ಜನ ರೆಡ್ಡಿ ಅವರಿಗೆ ಮನವಿ ಮಾಡಿದ್ದರು’ ಎಂದರು.

ADVERTISEMENT

ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ’ಬೋರ್‌ವೆಲ್‌ ವಿಚಾರವಾಗಿ ಕೆಲ ರಾಜಕೀಯ ಪಕ್ಷಗಳು ದೂರು ನೀಡಿದ್ದವು. ಉತ್ತರ ನೀಡುವಂತೆ ಕೆಆರ್‌ಪಿಪಿ ಪಕ್ಷದ ಜಿಲ್ಲಾಧ್ಯಕ್ಷರಿಗೆ ನೋಟಿಸ್‌ ನೀಡಲಾಗಿದೆ. ಇನ್ನು ಉತ್ತರ ಬಂದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.