ADVERTISEMENT

ಉತ್ತಮ ಮಳೆ: ಬಿತ್ತನೆ ಚುರುಕು

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 12:46 IST
Last Updated 4 ಜೂನ್ 2020, 12:46 IST
 ಕನಕಗಿರಿ ಸಮೀಪದ ಬಸರಿಹಾಳ ಗ್ರಾಮದ ರೈತ ಅಶೋಕ ಅವರು ಗುರುವಾರ ಬಿತ್ತನೆ ಮಾಡುತ್ತಿರುವುದು ಕಂಡು ಬಂತು
 ಕನಕಗಿರಿ ಸಮೀಪದ ಬಸರಿಹಾಳ ಗ್ರಾಮದ ರೈತ ಅಶೋಕ ಅವರು ಗುರುವಾರ ಬಿತ್ತನೆ ಮಾಡುತ್ತಿರುವುದು ಕಂಡು ಬಂತು   

ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಈ ಭಾಗದ ರೈತರು ಸಂತಸಗೊಂಡಿದ್ದು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ಸಮೀಪದ ಬಸರಿಹಾಳ, ಚಿಕ್ಕಮಾದಿನಾಳ, ನವಲಿ, ಸೂಳೇಕಲ್, ಗೌರಿಪುರ, ಕರಡೋಣ, ಗುಡದೂರ. ತಿಪ್ಪನಾಳ ಒಳಗೊಂಡಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಮಳೆ ಬಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ಮಗ್ನರಾಗಿದ್ದರೂ ತಾಲ್ಲೂಕಿನಲ್ಲಿ ಹೇಳಿಕೊಳ್ಳುವಷ್ಟು ಮಳೆ ಬಿದ್ದಿರಲಿಲ್ಲ. ಕೊರೊನಾ ಸೋಂಕು ಹರಡುವ ಭೀತಿ ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಯಲ್ಲಿ ಉಳಿದುಕೊಂಡು ನಿರಾಶೆಗೊಂಡು ವರುಣನ ದಾರಿ ನೋಡುತ್ತಿದ್ದ ರೈತರು ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟು ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಳ್ಳುವುದು, ಕೆಲ ಕಡೆ ಬಿತ್ತನೆ ಕೈಗೊಂಡಿರುವುದು ಕಂಡು ಬಂದಿದೆ.

ADVERTISEMENT

ಕೆಲಸವಿಲ್ಲದೆ ಮಳೆ ಬರುವಿಕೆಗಾಗಿ ಕಾದು ಕುಳಿತ್ತಿದ್ದ ಕುಶಲಕರ್ಮಿಗಳಾದ ಕಮ್ಮಾರ, ಬಡಿಗೇರರು ರೈತರಿಗೆ ಬಿತ್ತನೆಗೆ ಬೇಕಾದ ಕೃಷಿ ಸಾಮಾಗ್ರಿಗಳನ್ನು ತಯಾರಿಸುವಲ್ಲಿ ತಲ್ಲೀನರಾಗಿದ್ದಾರೆ. ರೈತ ಅಶೋಕ ಅವರು, ತಮ್ಮ ಹೊಲದಲ್ಲಿ ಸಜ್ಜೆ ಬಿತ್ತನೆ ಕೈಗೊಂಡಿರುವುದು ಗುರುವಾರ ಕಂಡು ಬಂತು.

ರೈತರು ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಸಜ್ಜೆ, ಸೂರ್ಯಕ್ರಾಂತಿ, ಮೆಕ್ಕೆಜೋಳ, ತೊಗರಿ ಬೀಜಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ.

ಸರ್ಕಾರ ನಿಗದಿ ಪಡಿಸಿದ ಸಬ್ಸಿಡಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷಿ ಅಧಿಕಾರಿ ನಾಗರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.