ಮಂಡ್ಯ: ‘ನಮ್ಮ ನಡಿಗೆ ಸಮಾನತೆ ಯೆಡೆಗೆ’ ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ‘ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಮಹಿಳಾ ಪರ ಚಿಂತನ–ಮಂಥನಕ್ಕೊಂದು ವೇದಿಕೆ ಸೃಷ್ಟಿಸಿಕೊಂಡಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಮಂಡ್ಯದಲ್ಲಿ ಮಾರ್ಚ್ 7 ಮತ್ತು 8ರಂದು ನಡೆಯಲಿರುವ ರಾಜ್ಯಮಟ್ಟದ ಸಮಾವೇಶ ಮಹಿಳಾ ಚಳವಳಿ ರೂಪ ಪಡೆದಿದೆ.
ಶನಿವಾರ ಬೆಳಿಗ್ಗೆ 10.30ಕ್ಕೆ ಅಂಬೇಡ್ಕರ್ ಭವನದಲ್ಲಿ ಆರಂಭ ಗೊಳ್ಳಲಿರುವ ಸಮಾವೇಶದಲ್ಲಿ ಸ್ತ್ರೀವಾದಿ ಚಿಂತಕಿ, ಸಾಹಿತಿ ಓಲ್ಗಾ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಓಲ್ಗಾ ಕಾವ್ಯನಾಮದೊಂದಿಗೆ ತೆಲುಗಿನಲ್ಲಿ ಬರೆಯುವ ಪಿ.ಲಲಿತಾ ಕುಮಾರಿ ಸ್ಪಷ್ಟ, ಖಚಿತ, ನೇರ ನುಡಿಗಳಿಂದ ಅಭಿಪ್ರಾಯ ದಾಖಲಿಸುವಲ್ಲಿ ಹೆಸರಾಗಿದ್ದಾರೆ. ಮಂಡ್ಯ ಸಮಾವೇಶದ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
l ನಿರ್ಭಯಾ ಪ್ರಕರಣದ ನಂತರವೂ ಸಾಮೂಹಿಕ ಅತ್ಯಾಚಾರ ನಿಂತಿಲ್ಲ. ನಮ್ಮ ಕಾನೂನು ವ್ಯವಸ್ಥೆಯಿಂದ ಅತ್ಯಾಚಾರ ತಡೆ ಅಸಾಧ್ಯವೇ?
ನಿರ್ಭಯಾ ಪ್ರಕರಣ ಮೊದಲನೆ ಯದೂ ಅಲ್ಲ, ಕೊನೆಯದೂ ಅಲ್ಲ. ಹೈದರಾಬಾದ್ನ ‘ದಿಶಾ’ ಸೇರಿ ನೂರಾರು ಮಹಿಳೆಯರು ಅತ್ಯಾ ಚಾರಕ್ಕೆ ಒಳಗಾಗಿದ್ದಾರೆ. ನೇಣು ಹಾಕುವುದರಿಂದ, ಎನ್ಕೌಂಟರ್ ಮಾಡುವುದರಿಂದ ಇಂತಹ ಪೈಶಾಚಿಕ ಘಟನೆಗಳನ್ನು ತಡೆಯುವುದು ಸಾಧ್ಯವಿಲ್ಲ. ಹೆಣ್ಣಿನ ಬಗೆಗಿನ ಮನೋಭಾವ ಬದಲಾಗಬೇಕು. ‘ಮಹಿಳೆ ಭೋಗದ ವಸ್ತು’ ಎಂಬ ದೃಷ್ಟಿಕೋನದಿಂದ ಹೊರಬರಬೇಕು.
l ಅತ್ಯಾಚಾರ, ದೌರ್ಜನ್ಯದಿಂದ ಸಂತ್ರಸ್ತರಾದ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವುದು ಹೇಗೆ?
ದೌರ್ಜನ್ಯ, ಅತ್ಯಾಚಾರ ಸಂತ್ರಸ್ತೆಯನ್ನು ‘ಶೀಲ–ಮಾನ’ದ ದೃಷ್ಟಿಯಿಂದ ಕಾಣಬಾರದು. ಒಂದು ಅಪಘಾತ, ದಾಳಿ ನಡೆದಿರುವ ರೀತಿಯಲ್ಲಿ ನೋಡಬೇಕು. ಯಾವುದೋ ಕೆಟ್ಟ ಗಳಿಗೆಯಲ್ಲಿ ನಡೆದುಹೋದ ಘಟನೆಯಿಂದಲೇ ಆಕೆಯನ್ನು ಗುರುತಿಸಬಾರದು. ಆಕೆಯ ಶರೀರಕ್ಕಷ್ಟೇ ಗಾಯವಾಗಿದೆ, ಮನಸ್ಸು ಶುದ್ಧವಾಗಿದೆ ಎಂಬುದನ್ನು ಅರಿಯಬೇಕು.
l ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ‘ರಾಜಕೀಯದಲ್ಲಿ ಮಹಿಳಾ ಮೀಸಲಾತಿ’ ಜಾರಿಯಾಗುವುದು ಯಾವಾಗ?
ರಾಜಕೀಯ ಮೀಸಲಾತಿಯ ಕನಸು ಎಂದಿಗೂ ನನಸಾಗುವುದಿಲ್ಲ ಎಂಬುದು ನನ್ನ ಭಾವನೆ. ಮಹಿಳೆಗೆ ಮೀಸಲಾತಿ ಕೊಟ್ಟರೆ ಆಗುವ ಪರಿಣಾಮವೇನು ಎಂಬುದು ಪುರುಷರಿಗೆ ಚೆನ್ನಾಗಿ ಗೊತ್ತಿದೆ. ತಮ್ಮ ಆಧಿಪತ್ಯವನ್ನು ಮಹಿಳೆಗೆ ಬಿಟ್ಟುಕೊಡಲು ನಮ್ಮ ರಾಜಕಾರಣಿಗಳು ಸಿದ್ಧರಿಲ್ಲ. ಪಕ್ಷ ರಾಜಕಾರಣದಲ್ಲಿ ಮಹಿಳೆಯನ್ನು ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಾರಷ್ಟೆ. ಮಹಿಳೆ ರಾಜಕೀಯವಾಗಿ ಹೊಸ ಮಾರ್ಗ ಹುಡುಕಿಕೊಳ್ಳಬೇಕು.
l ಭೂಮಿತಾಯಿಯೂ ಹೆಣ್ಣು, ಕೆಲವರಿಗೆ ಏಕೆ ಹೆಣ್ಣು ಮಗು ಬೇಡವಾಗುತ್ತದೆ?
ನಾವು ಭೂಮಿಯನ್ನೂ ಸರ್ವನಾಶ ಮಾಡುತ್ತಿದ್ದೇವೆ. ಇನ್ನು, ಹೆಣ್ಣು ಯಾವ ಲೆಕ್ಕ? ಹೆಣ್ಣು ಮಕ್ಕಳ ಮೇಲಿರುವ ಅಸಹನೆ ಕೊನೆಯಾಗುವವರೆಗೂ ಶೋಷಣೆ ನಿಲ್ಲುವುದಿಲ್ಲ.
l ಹೆಚ್ಚುತ್ತಿರುವ ಬಾಲ್ಯವಿವಾಹ, ಮರ್ಯಾದೆಗೇಡು ಹತ್ಯೆ, ಭ್ರೂಣಹತ್ಯೆ ಬಗ್ಗೆ ಏನು ಹೇಳುತ್ತೀರಿ?
ಲಿಂಗತ್ವ ಅಸಮಾನತೆ ಇಡೀ ದೇಶದಲ್ಲಿದೆ. ಕೇವಲ ಮಾತು, ಉಪನ್ಯಾಸ, ಕಾನೂನುಗಳಲ್ಲಿ ಸಮಾನತೆ ಸಾರಿದರೆ ಇಂತಹ ಅನಿಷ್ಟ ಪದ್ಧತಿಗಳು ಬದಲಾಗುವುದಿಲ್ಲ. ಜನರು ನೈತಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ರಾಜಕೀಯ ಇಚ್ಛಾಶಕ್ತಿ ಮೂಡಬೇಕು.
l ಮುಟ್ಟಾಗಿದ್ದಾರಾ ಎಂಬುದನ್ನು ಪರಿಶೀಲಿಸಲು ಈಚೆಗೆ ಕಾಲೇಜೊಂದ ರಲ್ಲಿ ಯುವತಿಯರ ಒಳಉಡುಪು ತೆಗೆಸಿದ್ದರಲ್ಲ...?
ಈ ಆಧುನಿಕ ಯುಗದಲ್ಲಿ ವಿಜ್ಞಾನಿಗಳು ಕೂಡ ಮೌಢ್ಯಗಳನ್ನು ನಂಬುತ್ತಾರೆ. ಜ್ಞಾನವು ವಿವೇಕದ ರೂಪ ಪಡೆದಿಲ್ಲ. ನಾವು 21ನೇ ಶತಮಾನದಲ್ಲಿದ್ದರೂ ನಮ್ಮ ವಿವೇಕ 12ನೇ ಶತಮಾನಕ್ಕೂ ಹಿಂದೆ ಹೋಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.