ADVERTISEMENT

ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಲಿದೆ: ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಸಂದರ್ಶನ

ಎಂ.ಎನ್.ಯೋಗೇಶ್‌
Published 3 ಡಿಸೆಂಬರ್ 2019, 9:12 IST
Last Updated 3 ಡಿಸೆಂಬರ್ 2019, 9:12 IST
ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ
ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ    

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ವಿಧಾನಸಭಾ ಉಪಚುನಾವಣೆಯನ್ನುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ.ಕ್ಷೇತ್ರದಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಸಂದರ್ಶನ ಇಲ್ಲಿದೆ.

* ಜನ ನಿಮ್ಮನ್ನು ಐದು ವರ್ಷಕ್ಕೆ ಆಯ್ಕೆ ಮಾಡಿದ್ದರು, ರಾಜೀನಾಮೆ ನೀಡಿ ದ್ರೋಹ ಮಾಡಿದಂತಾಗಲಿಲ್ಲವೇ?

ಕಳೆದ 15 ವರ್ಷದಿಂದ ಜನರ ಜೊತೆಗಿದ್ದೇನೆ. ನಾನೆಂದೂ ಕ್ಷೇತ್ರದ ಜನರಿಗೆ ದ್ರೋಹ ಮಾಡಿಲ್ಲ. ದೇವೇಗೌಡ ಕುಟುಂಬ ನೀಡಿದ ಕಿರುಕುಳದಿಂದ ಕಣ್ಣೀರಲ್ಲಿ ಕೈತೊಳೆದಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗದಿದ್ದರೆ ಶಾಸಕನಾಗಿ ಏಕಾದರೂ ಉಳಿಯಬೇಕು ‌ಎನಿಸಿತು. ಮುಖ್ಯಮಂತ್ರಿಗಳ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಲು ರಾಜೀನಾಮೆ ನೀಡಿದೆ.

ADVERTISEMENT

* 6 ವರ್ಷಗಳಿಂದ ಶಾಸಕರಾಗಿ ನೀವು ಮಾಡಿದ್ದೇನು?

ಅಭಿವೃದ್ಧಿ ಕೆಲಸ ಮಾಡಲುಬಿಟ್ಟರೆ ತಾನೇ? ಬೆಳಿಗ್ಗೆ ಕಡತಗಳಿಗೆ ಸಹಿ ಮಾಡಿಸಿಕೊಂಡರೆ ಸಂಜೆ ವೇಳೆಗೆ ಅವು ನಾಪತ್ತೆಯಾಗುತ್ತಿದ್ದವು. ಅಧಿಕಾರಿಗಳೂ ನನಗೆ ಕೈ ಜೋಡಿಸಲಿಲ್ಲ. ಅದರ ನಡುವೆಯೂ ಕ್ಷೇತ್ರದ ಕೆರೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದೇನೆ. ಸಂತೇಬಾಚಹಳ್ಳಿ ಹೋಬಳಿಗೆ ನೀರಾವರಿ ಯೋಜನೆ ಜಾರಿಗೊಳಿಸಿದ್ದೇನೆ. ಅಂದುಕೊಂಡಷ್ಟು ಅಭಿವೃದ್ಧಿ ಮಾಡಲಾಗಲಿಲ್ಲ. ಹೀಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದೆ.

* ನಿಮ್ಮ‘ತ್ಯಾಗ’ ಹಣಕ್ಕೋ, ಅಧಿಕಾರಕ್ಕೋ, ಅಭಿವೃದ್ಧಿಗೋ?

ನಾನು ಹಣಕ್ಕೆ, ಅಧಿಕಾರಕ್ಕೆ ಎಂದೂ ರಾಜಕಾರಣ ಮಾಡುವವನಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ್ದೇನೆ. ಸ್ವಾಭಿಮಾನದಿಂದ ಜನರ ಮುಂದೆ ಮತಯಾಚನೆ ಮಾಡುತ್ತಿದ್ಧೇನೆ.

* ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆದ್ದೇ ಇಲ್ಲವಲ್ಲಾ?

ಅದು ಹಿಂದಿನ ಮಾತು, ಈಗ ಮೊದಲಿನಂತಿಲ್ಲ. ಕೆ.ಆರ್‌.ಪೇಟೆ ಕ್ಷೇತ್ರ ಬಿಜೆಪಿಯತ್ತ ಪರಿವರ್ತನೆಯಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಮೊಮ್ಮಗ, ಮುಖ್ಯಮಂತ್ರಿ (ಎಚ್‌ಡಿಕೆ) ಮಗ ಸೋತಿದ್ದೇ ಇದಕ್ಕೆ ಸಾಕ್ಷಿ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳುತ್ತದೆ.

* ನೀವು ಎರಡು ಬಾರಿ ಶಾಸಕರಾಗಿದ್ದು ದೇವೇಗೌಡ ಕುಟುಂಬದ ಬೆಂಬಲದಿಂದ ಎನ್ನುವ ಆರೋಪವಿದೆಯಲ್ಲಾ?

ಈಗ ಸ್ವತಃ ಮುಖ್ಯಮಂತ್ರಿಗಳ ಬೆಂಬಲದಿಂದ ಸಚಿವನಾಗುತ್ತೇನೆ. ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.