ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬಳಿ ಕನಕದಾಸರು ಧ್ಯಾನ ಮಾಡಿದ, ಕಾವೇರಿ ನದಿ ಮಧ್ಯೆ ಇರುವ ಕನಕನ ಬಂಡೆ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘವು ಪ್ರಯತ್ನ ಮಾಡಲಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿದರು.
ತಾಲ್ಲೂಕಿನ ಮಹದೇವಪುರಕ್ಕೆ ಭಾನುವಾರ ಸಂಘದ ಪದಾಧಿಕಾರಿಗಳ ಜತೆ ಭೇಟಿ ನೀಡಿ ಅವರು ಮಾತನಾಡಿದರು.
ಕನಕದಾಸರು ದಕ್ಷಿಣ ಕರ್ನಾಟಕದ ಧಾರ್ಮಿಕ ತಾಣಗಳಿಗೆ ಭೇಟಿ ನೀಡುವ ವೇಳೆ ಮಹದೇವಪುರದಲ್ಲಿ, ಕಾವೇರಿ ನದಿಯ ಮಧ್ಯೆ ಇರುವ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡಿದ್ದಾರೆ. ಇಲ್ಲಿ ಅವರು ತಂಗಿದ್ದ ಕಾರಣಕ್ಕೆ ಈ ಸ್ಥಳ ಮಹತ್ವ ಪಡೆದುಕೊಂಡಿದೆ. ಕುರುಬರ ಸಂಘವು ಕನಕನ ಬಂಡೆ ಸುತ್ತಲಿನ ಪ್ರದೇಶ ಅಭಿವೃದ್ಧಿ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.
ಪಟ್ಟಣದ ಸುಬ್ರಹ್ಮಣ್ಯಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ಕುರುಬರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆಯಲ್ಲಿ ಮಾತನಾಡಿದ ಸುಬ್ರಹ್ಮಣ್ಯ, ಕುರುಬರ ಸಂಘದಿಂದ ವಿದ್ಯಾರ್ಥಿನಿಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಂಘವನ್ನು ಪುನರ್ ರಚಿಸುವ ಜತೆಗೆ ಮಹಿಳಾ ಘಟಕ, ಯುವ ಘಟಕ, ಕಾನೂನು ಘಟಕ, ವಿದ್ಯಾರ್ಥಿ ಘಟಕಗಳನ್ನು ರಚಿಸಲಾಗುವುದು ಎಂದರು.
ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆದ ಮಾಜಿ ಮೇಯರ್ ವೆಂಕಟೇಶಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಸುರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಭಾಸ್ಕರ್, ಸಂಘಟನಾ ಕಾರ್ಯದರ್ಶಿ ಎಂ.ಲೋಕೇಶ್, ಪ್ರಧಾನ ಕಾರ್ಯದರ್ಶಿ ಮುದ್ದೇಗೌಡ, ಎಪಿಎಂಸಿ ನಿರ್ದೇಶಕ ರಾಮೇಗೌಡ, ಚೇರ್ಮನ್ ಚನ್ನಪ್ಪ, ಪುರಸಭೆ ಸದಸ್ಯರಾದ ವಸಂತಕುಮಾರಿ, ಪಾರ್ವತಮ್ಮ, ಗ್ರಾ.ಪಂ. ಸದಸ್ಯರಾದ ರಾಧಾ ಮಹೇಶ್, ಶಶಿಕಲಾ, ಟಿಎಪಿಸಿ ಎಂಎಸ್ ಮಾಜಿ ಅಧ್ಯಕ್ಷ ರಾಮೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ರವಿಕುಮಾರ್, ಶಿವಮಲ್ಲು, ವಾಸು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.