ADVERTISEMENT

ಶಿವರಾತ್ರಿ: ಭಕ್ತರಿಗೆ ಅನ್ನಸಂತರ್ಪಣೆ

ಜಾಗರಣೆ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮ, ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 12:58 IST
Last Updated 19 ಫೆಬ್ರುವರಿ 2023, 12:58 IST
ತೋಟಗಾರಿಕೆ ಇಲಾಖೆ ಆವರಣದಲ್ಲಿ ಮುನೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ನಡೆಸಲಾಯಿತು
ತೋಟಗಾರಿಕೆ ಇಲಾಖೆ ಆವರಣದಲ್ಲಿ ಮುನೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ನಡೆಸಲಾಯಿತು   

ಮಂಡ್ಯ: ಮಹಾಶಿವರಾತ್ರಿ ಹಬ್ಬದ ಮಾರನೇ ದಿನ ಭಾನುವಾರ ಜಿಲ್ಲೆಯಾದ್ಯಂತ ಶಿವಾಲಯಗಳಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ವೈಭವಯುತವಾಗಿ ನಡೆಯಿತು. ಶನಿವಾರ ರಾತ್ರಿಯಿಡೀ ಜಾಗರಣೆ ಮಾಡಿದ ನಂತರ ಭಾನುವಾರ ಭಕ್ತರು ಪ್ರಸಾದ ಸೇವಿಸಿದರು.

ದೇವಾಲಯಗಳಲ್ಲಿ ಶನಿವಾರ ರಾತ್ರಿಯಿಡೀ ದೇವರ ಉತ್ಸವ ನಡೆಯಿತು. ಉತ್ಸವ ಮೂರ್ತಿಯನ್ನು ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಿವಾಸಿಗಳು ಹಣ್ಣು ಕಾಯಿ ನೀಡಿ ಪೂಜೆ ಮಾಡಿಸಿದರು. ಬಹುತೇಕ ಭಕ್ತರು ಶಿವರಾತ್ರಿ ಅಂಗವಾಗಿ ಅನ್ನ ತಿಂದಿರಲಿಲ್ಲ. ಹಣ್ಣು ಹಂಪಲು ಸೇವಿಸಿ ಉಪವಾಸ ವ್ರತಾಚರಣೆ ಮಾಡಿದ್ದರು. ಭಾನುವಾರ ಬೆಳಿಗ್ಗೆ ಅನ್ನಸಂತರ್ಪಣೆಯ ಮೂಲಕ ವ್ರತಾಚರಣೆ ಪೂರ್ಣಗೊಳಿಸಲಾಯಿತು.

ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿರುವ ಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಅವರೇಕಾಳು ಹಿಟ್ಟು ಪ್ರಸಾದವನ್ನು ಭಕ್ತಾದಿಗಳಿಗೆ ಪ್ರಸಾದವಾಗಿ ನೀಡಲಾಯಿತು. ಸಾವಿರಾರು ಭಕ್ತರು ಇಲ್ಲಿ ಊಟ ಸೇವನೆ ಮಾಡಿದರು.

ADVERTISEMENT

ನಗರದ ಹೊಸಹಳ್ಳಿ ಬಡಾವಣೆಯ ಶನೀಶ್ವರ ದೇವಾಲಯ, ಶಂಕರಪುರ, ಉದಯಗಿರಿ ಶನೀಶ್ವರ ದೇವಾಲಯ, ಕಲ್ಲಹಳ್ಳಿಯ ಮಲೈಮಹದೇಶ್ವರ, ನೆಹರೂನಗರದ ರಾಮಸಭಾ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಅರಕೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ರಾತ್ರಿಯಿಡೀ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಲ್ಲೂಕಿನ ಹಳುವಾಡಿ ಶನೀಶ್ವರ ದೇವಾಲಯ, ಚಿಕ್ಕ ಮಂಡ್ಯದ ಶನಿದೇವರ ದೇವಾಲಯ, ಹಳ್ಳಿಕೇಶ್ವರ ದೇವಾಲಯ, ಹೊಳಲು ಗ್ರಾಮದಲ್ಲಿರುವ ತಾಂಡವೇಶ್ವರ ದೇವಸ್ಥಾನ, ಮಂಗಲ ಗ್ರಾಮದ ಮಲ್ಲೇಶ್ವರಸ್ವಾಮಿ, ಕಿರಗಂದೂರು ಕಾಡುಮಲ್ಲೇಶ್ವರಸ್ವಾಮಿ, ರಾಗಿಮುದ್ದನಹಳ್ಳಿ ಗ್ರಾಮದ ಶಂಭುಲಿಂಗೇಶ್ವರಸ್ವಾಮಿ, ಶನೀಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಿತು.

ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ರಾತ್ರಿಯಿಡೀ ಭಕ್ತಿಗೀತೆ, ಭಾವಗೀತೆ, ರಸಮಂಜರಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಾಗರಣೆ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಭಜನೆ ಕಾರ್ಯಕ್ರಮಗಳು ಸಾರಾಗವಾಗಿ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.