ಮೈಸೂರು: ‘ದೇಗುಲ ರಕ್ಷಣೆಗೆ ಸೂಕ್ತ ಕ್ರಮಕೈಗೊಂಡು ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.
‘ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ಕರೆ ಮಾಡಿ ದೇಗುಲ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲದಿದ್ದರೂ ಏಕಾಏಕಿ ಉಚ್ಚಗಣಿ ದೇಗುಲ ತೆರವುಗೊಳಿಸಿರುವ ನಂಜನಗೂಡು ದಂಡಾಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ. ಜಿಲ್ಲಾಡಳಿತಕ್ಕೂ ಸೂಚನೆ ನೀಡಬೇಕೆಂದು ಕೇಳಿಕೊಂಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿನ ಭಯ ನಿವಾರಣೆ ಮಾಡಿದ್ದಾರೆ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ದೇಗುಲ ಒಡೆಯಬೇಕೆಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಎಲ್ಲೂ ಹೇಳಿಲ್ಲ. 2009ಕ್ಕಿಂತ ಮೊದಲು ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಕ್ಕೆ ಸಂಬಂಧಿಸಿದಂತೆ ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ಪರಾಮರ್ಶಿಸಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದೆ. ಸಾಧ್ಯವಾದರೆ ದೇಗುಲ ಉಳಿಸಿಕೊಳ್ಳಬೇಕು, ಇಲ್ಲದಿದ್ದರೆ ಸ್ಥಳಾಂತರ ಮಾಡಬೇಕು. ಆದರೆ, ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದಾರೆ. ಈ ವಿಚಾರವನ್ನೂ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ಇನ್ನುಮುಂದೆ ಅಧಿಕಾರಿಗಳು ದೇಗುಲ ಕಟ್ಟಡ ತೆರವು ಮಾಡಲು ಪ್ರಯತ್ನಿಸಬಾರದು’ ಎಂದರು.
‘ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯೊಡ್ಡದ, ಉದ್ಯಾನಗಳಲ್ಲಿರುವ ದೇಗುಲಗಳನ್ನು ಸಕ್ರಮಗೊಳಿಸಬೇಕು. ಸಮಸ್ಯೆ ಉಂಟಾದರೆ ಸ್ಥಳಾಂತರ ಮಾಡಬೇಕು. ಸರಿಯಾಗಿ ಪರಾಮರ್ಶೆ ಮಾಡಿ ಹೊಸದಾಗಿ ಪಟ್ಟಿ ತಯಾರಿಸಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ಗೆ ಸಲ್ಲಿಸಬೇಕು. ಜೊತೆಗೆ ವಕ್ಫ್ ಮಂಡಳಿ ಮಾದರಿಯಲ್ಲಿ ಹಿಂದೂ ದೇವಾಲಯ ರಕ್ಷಣೆಗೂ ಒಂದು ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಮನವಿ ಮಾಡಿದರು.
‘2009ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ದೇಗುಲ, ಚರ್ಚ್, ಮಸೀದಿ ನಿರ್ಮಿಸುವಂತಿಲ್ಲ. ಆದರೆ, ಮೈಸೂರಿನ ಕ್ಯಾತಮಾರನಹಳ್ಳಿಯ ವಸತಿ ಪ್ರದೇಶದಲ್ಲಿ ಮಸೀದಿ ಅನಧಿಕೃತವಾಗಿ ತಲೆ ಎತ್ತಿದೆ. ಇದು ಹಲವಾರು ಸಮಸ್ಯೆಗೆ ಕಾರಣವಾಗಿದೆ. ಇದು ಕೋರ್ಟ್ ಆದೇಶದ ಉಲ್ಲಂಘನೇ ಅಲ್ಲವೇ’ ಎಂದು ಪ್ರಶ್ನಿಸಿದರು.
‘ಧರ್ಮ ಹಾಗೂ ನಂಬಿಕೆಗಳ ಬಗ್ಗೆ ಮಾತನಾಡಲು ಯಾರ ಅಪ್ಪಣೆಯೂ ಬೇಕಿಲ್ಲ. ಜನರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಧ್ವನಿ ಎತ್ತುವುದು ನನ್ನ ಕರ್ತವ್ಯ’ ಎಂದರು.
ಇವನ್ನೂ ಓದಿ
*ದೇಗುಲ ತೆರವುಗೊಳಿಸಿದರೆ ಜನಾಂದೋಲನ: ಸಂಸದ ಪ್ರತಾಪ ಸಿಂಹ
*ಜಿಲ್ಲಾಡಳಿತ ಕಳ್ಳರಂತೆ ಬಂದು ದೇಗುಲಗಳನ್ನು ತೆರವುಗೊಳಿಸುತ್ತಿದೆ: ಪ್ರತಾಪ ಸಿಂಹ
*ನಾವೇನು ಬಳೆ ತೊಟ್ಟುಕೊಂಡಿಲ್ಲ: ಪ್ರತಾಪ ಸಿಂಹ ಹೇಳಿಕೆಗೆ ತನ್ವೀರ್ ಸೇಠ್ ತಿರುಗೇಟು
*ಹಿಂದೂ ದೇಗುಲಗಳು ಮಾತ್ರ ಕಾಣುತ್ತವೆಯೇ: ಪ್ರತಾಪ ಸಿಂಹ
*ನಮಾಜ್ ನಡೆಯುತ್ತಿದ್ದರೆ ಗಣೇಶೋತ್ಸವಕ್ಕೂ ಅನುಮತಿ ನೀಡಿ: ಪ್ರತಾಪಸಿಂಹ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.