ADVERTISEMENT

ಇಳೆಯೂ ಉಳಿಯಲಿ...

ರೇವಣ್ಣ ಎಂ.
Published 19 ಏಪ್ರಿಲ್ 2019, 20:00 IST
Last Updated 19 ಏಪ್ರಿಲ್ 2019, 20:00 IST
.
.   

ಏಪ್ರಿಲ್‌ 22 ವಿಶ್ವ ಭೂಮಿ ದಿನ. ಹೌದು... ಇದು ಈ ಇಳೆಯಲ್ಲಿ ಇರುವ ಎಲ್ಲರ ಪಾಲಿಗೂ ಅತಿ ಪವಿತ್ರವಾದ ದಿನ. ಜತೆಗೆ ಈ ಅವನಿಯು ಉನ್ನತಿಯಾಗಲಿ ಎಂದು ಸಂಕಲ್ಪ ಮಾಡುವ ದಿನವೂ ಹೌದು. ಇಂದು ನಾವು ಅನೇಕ ಪ್ರಾಕೃತಿಕ ವೈರುಧ್ಯಗಳನ್ನು ಕಾಣುತ್ತಿದ್ದೇವೆ. ಈ ಎಲ್ಲ ಬಗೆಯ ಸಂಕಷ್ಟಗಳು ಭೂಮಿಯ ಸಂಕಟಗಳೂ ಆಗಿವೆ. ಅವೆಲ್ಲವನ್ನೂ ಭೂಮಿ ದಿನ ನಿವಾರಣೆ ಮಾಡಲಿ ಎಂಬುದು ಎಲ್ಲರ ಆಶಯ.

ಪ್ರಕೃತಿಯ ಸೃಷ್ಟಿಯೇ ಆಗಿರುವ ಮಾನವನೇ ಪ್ರಕೃತಿಗೆ ವಿರುದ್ಧವಾಗಿ, ಭೂಮಿ ತಾಯಿಗೆ ಅಪಚಾರವಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ. ಇದರ ಅರಿವು ನಿಧಾನವಾಗಿ ಮಾನವನನ್ನು ಕಾಡಲಾರಂಬಿಸಿದೆ. ಕೊಂಚ ಎಚ್ಚರಿಕೆಯನ್ನೂ ತಾಳಿದ್ದಾನೆ. ಇದರ ಜತೆಗೆ, ಭೂ ಸಂಪತ್ತಿನಿಂದ ದೊರಕಬಹುದಾದ ಕ್ಷಣಿಕ ಧನಕ್ಕೆ ಮಾರುಹೋಗಿ ಭೂಮಿಯ ಮೇಲೆ ಇನ್ನಿಲ್ಲದ ಅನಾಚಾರಗಳು ನಡೆಯುತ್ತಿವೆ. ಭೂಮಿಯ ಜಲಮೂಲಗಳಿಗೆ ಮನುಷ್ಯ ನೀಡುತ್ತಿರುವ ಆಘಾತದಿಂದ ಭೂಮಿ ತಾಯಿ ಚೇತರಿಸಿಕೊಳ್ಳಲಾರದಂಥ ಸ್ಥಿತಿ ಇದೆ. ಅಭಿವೃದ್ಧಿ ಎಂಬುದರ ಹಿಂದೆ ಬಿದ್ದಿರುವ ಮಾನವ ಭೂಮಿಯ ಮೇಲೆ ಪ್ರಯೋಗಗಳನ್ನು ಮಾಡಲಾರಂಭಿಸಿದ್ದಾನೆ. ಇದು ಹೀಗೆ ಮುಂದುವರೆದರೆ ಈ ಇಳೆಯನ್ನು ಮುಂದೊಂದು ದಿನ ಚೇತರಿಸಿಕೊಳ್ಳಲಾಗದಂಥ ಸ್ಥಿತಿಗೆ ದೂಡುವುದರಲ್ಲಿ ಸಂಶಯವಿಲ್ಲ.

ಸಾಂಸ್ಕೃತಿಕ ನಗರದ ಅಸ್ಮಿತೆಯಾಗಿರುವ ಹಲವು ಕೆರೆಗಳು ಇಂದು ಕಲುಷಿತಗೊಂಡಿವೆ. ಒಂದು ಕಾಲದಲ್ಲಿ ಕುಡಿಯಲೂ ಬಳಕೆಯಾಗುತ್ತಿದ್ದ ನೀರಿನ ಈ ಸೆಲೆಗಳ ಒಡಲನ್ನು ಇಂದು ಸ್ಪರ್ಶಿಸಲು ಅಸಹ್ಯ ಪಡುವಂತಾಗಿದೆ. ಇದಕ್ಕೆ ಕಾರಣ ಇಷ್ಟೆ. ತನ್ನ ಕೊಳಕು, ಕೊಳಚೆಗಳನ್ನೆಲ್ಲ ಇಂಥ ಜಲಮೂಲಗಳಿಗೆ ಸೇರುವಂತೆ ಮಾಡಿರುವ ನಮ್ಮ ಆಡಳಿತ ವ್ಯವಸ್ಥೆ, ಜನರಲ್ಲಿ ಮರೆತು ಹೋಗಿರುವ ಪರಿಸರ ಕಾಳಜಿಯೇ ಆಗಿದೆ.

ADVERTISEMENT

ಈ ಭುವಿಯ ಅಂತರ್ಯದಿಂದ ಜೀವಜಲವನ್ನು ಪೂರೈಸುತ್ತಿದ್ದ ನಗರದ ಹಲವು ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದನ್ನು ಸರ್ಕಾರದ ಸಂಸ್ಥೆಗಳೇ ದೃಢೀಕರಿಸಿವೆ. ನಗರದ ಒಂದು ಕ್ಷೇತ್ರದಲ್ಲಿ ಮಾತ್ರ ಈ ಅಧ್ಯಯನ ನಡೆದಿದೆ. ನಗರದ ಬಹುತೇಕ ಕೊಳವೆ ಬಾವಿಗಳೂ ಇದಕ್ಕಿಂತ ಭಿನ್ನವಾಗಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ.

ಇದರ ಕಾರಣವನ್ನು ಕೇಳಿದರೆ ಎಂಥವರೂ ದಿಗಿಲುಗೊಳ್ಳಲೇ ಬೇಕು. ಏಕೆಂದರೆ ನೀರಿನ ಮೂಲಗಳು ಕಲುಷಿತಗೊಳ್ಳಲು ಕಾರಣ ಮಾನವ ನಿರ್ಮಿತ ಅವಾಂತರಗಳೇ ಆಗಿವೆ. ಒಳಚರಂಡಿಯಲ್ಲಿ ಸಾಗಬೇಕಾದ ಕೊಳಚೆಯು ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲೇ ಹರಿದು ಇಂಗಿ ನೀರಿನ ಮೂಲಗಳನ್ನು ಸೇರುತ್ತಿದೆ. ಹೀಗೆ ಭೂಮಿಯ ಒಂದೊಂದು ಅಂಗಾಂಗಗಳೂ ಮನುಷ್ಯನ ದುರಾಸೆಗೆ ಬಲಿಯಾಗುತ್ತಿವೆ.

ಘನತ್ಯಾಜ್ಯ ನಿರ್ವಹಣೆ; ಪಾಲನೆಯಾಗದ ಮಾರ್ಗದರ್ಶಿ: ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ನಿರ್ಮಾಣ ಕಾಮಗಾರಿಗಳೂ ಭರದಿಂದ ನಡೆಯುತ್ತಿವೆ. ಹಿಂದೆ ಇದ್ದ ಕಟ್ಟಡಗಳನ್ನು ಕೆಡವಿದಾಗ ಉಂಟಾಗುವ ತ್ಯಾಜ್ಯಗಳನ್ನು ನಗರದ ಹೊರವಲಯದಲ್ಲೋ, ಹೆದ್ದಾರಿಗಳ ಪಕ್ಕದಲ್ಲೋ ಸುರಿಯುತ್ತಿರುವುದನ್ನು ನಾವು ಕಾಣುತ್ತೇವೆ. ಇವುಗಳನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಭೂಮಿಗೆ ಭಾರವಾಗಿ ಪರಿಣಮಿಸಿದೆ. ಇವುಗಳ ಜತೆಗೆ ಇರುವ ಕಬ್ಬಿಣ, ಮರ, ಪ್ಲಾಸ್ಟಿಕ್‌, ಗಾಜಿನ ಚೂರು ಪಾದಚಾರಿಗಳಿಗೂ ತೊಂದರೆಯಾಗಿ ಪರಿಣಮಿಸುತ್ತದೆ. ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಪರಿಸರಕ್ಕೆ ಹಾನಿಕಾರಕವಾಗಿರುವ ಈ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ದಂಡ ವಿಧಿಸುವ, ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಿಯಮ ರೂಪಿಸುವ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರಕ್ಕೆ ಪಾಲಿಕೆ ಮುಂದಾಗಬೇಕು. ಘನತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ವಹಣೆಗೆ ಒತ್ತು ನೀಡಬೇಕು. ಮುಖ್ಯರಸ್ತೆಗಳ ಬದಿ ಈ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾಮಾಜಿಕ ಕಾರ್ಯಕರ್ತ ಜಯಂತ್‌ ಅವರ ಆಗ್ರಹ.

ಮಾನವ ತನ್ನ ಅಭಿವೃದ್ಧಿಯ ನಾಗಾಲೋಟದಲ್ಲಿ ಎಲ್ಲವನ್ನೂ ಮೆಟ್ಟಿನಿಂತಿದ್ದಾನೆ. ಆ ತುಳಿತದಿಂದ ಪ್ರಕೃತಿಯಲ್ಲಿರುವ ಅದೆಷ್ಟೋ ಜೀವರಾಶಿಗಳ ಅಸ್ತಿತ್ವಕ್ಕೇ ಧಕ್ಕೆಯಾಗಿದೆ. ನಗರೀಕರಣದ ವೇಗಕ್ಕೆ ಕಾಡು ಕರಗುತ್ತಿದೆ. ನಾಡು ಬರಡಾಗುತ್ತಿದೆ. ಜೀವಸಂಕುಲಗಳು ಅಳಿವಿನ ಅಂಚಿನಲ್ಲಿವೆ.

ನಗರೀಕರಣ ಹಾಗೂ ಯಂತ್ರೋಪಕರಣಗಳ ಅತಿ ಬಳಕೆಯಿಂದ ಜೀವಸಂಕುಲಗಳ ಅಸ್ತಿತ್ವ ನಾಶವಾಗುತ್ತಿದೆ. ಭೂಮಿಯಲ್ಲಾಗುತ್ತಿರುವ ಬದಲಾವಣೆ, ಪರಿಸರ ಮೇಲಾಗುತ್ತಿರುವ ದೌರ್ಜನ್ಯ, ಮಾಲಿನ್ಯದಿಂದಾಗುತ್ತಿರುವ ತೊಂದರೆಗಳ ಬಗ್ಗೆ ಅರಿತುಕೊಂಡು ಅವುಗಳನ್ನು ತಿದ್ದಿಕೊಳ್ಳುವ ಯತ್ನಗಳಾಗು. ಈ ನಿಟ್ಟಿನಲ್ಲಿ ಭೂಮಿಯ ಸಂರಕ್ಷಣೆ ಹಾಗೂ ಪ್ರಕೃತಿಯ ಸಂಪತ್ತನ್ನು ಉಳಿಸುವ ಆಚರಣೆಯೇ ಈ ಭೂಮಿ ದಿನ.

ಪ್ರತಿಯೊಂದು ದಿನವೂ ಒಂದೊಂದು ರೀತಿಯ ಆಚರಣೆಗಳು ನಮ್ಮ ನಡುವೆ ಬಂದುಹೋಗುತ್ತವೆ. ಇದರಲ್ಲಿ ನಾವು ಕೆಲವನ್ನು ಆರಿಸಿಕೊಂಡು ಅವುಗಳನ್ನು ಆಚರಿಸುತ್ತೇವೆ. ವಿಶ್ವ ಪರಿಸರ ದಿನ, ತಾಪಮಾನ ದಿನ ಎಂದೆಲ್ಲ ಆಚರಿಸುತ್ತೇವೆ. ಆದರೆ ಅದಕ್ಕೆಲ್ಲ ಮೂಲವಾದ ಭೂಮಿಯನ್ನು ಮರೆತಿರುತ್ತೇವೆ. ಯಾವುದೇ ಅಭಿವೃದ್ಧಿ, ಜೀವ ಸಂಕುಲಗಳ ಜೀವನ ಸೇರಿದಂತೆ ಎಲ್ಲದ್ದಕ್ಕೂ ಭೂಮಿಯೇ ಮೂಲ. ಮಾತೃಸ್ವರೂಪಿ ಭೂತಾಯಿಯನ್ನು ಆರೋಗ್ಯವಾಗಿಟ್ಟುಕೊಂಡರೆ ಯಾವುದೇ ತೊಂದರೆ ಎದುರಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.