ಹಂಪಾಪುರ: ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಉಚ್ಚಗಣಿ ಗ್ರಾಮದ ಆದಿಶಕ್ತಿ ಮಹದೇವಮ್ಮ ದೇವಾಲಯವನ್ನು ತಾಲ್ಲೂಕು ಆಡಳಿತವು ಬುಧವಾರ ನೆಲಸಮಗೊಳಿಸಿದೆ.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತಾಲ್ಲೂಕು ದಂಡಾಧಿಕಾರಿಗಳ ನೇತೃತ್ವದ ತಂಡ ಬುಧವಾರ ಬೆಳಿಗ್ಗೆ 4 ಗಂಟೆಗೆ ರಾಜ್ಯ ಹೆದ್ದಾರಿ 57ರಲ್ಲಿರುವ ದೇವಾಲಯವನ್ನು ಜೆಸಿಬಿ ಯಂತ್ರದ ಮೂಲಕ ಕೆಡವಲು ಮುಂದಾಯಿತು. ಸ್ಥಳಕ್ಕೆ ಬಂದ ಗ್ರಾಮಸ್ಥರು ತಡೆಯಲು ಮುಂದಾದರು. ಪೊಲೀಸರ ರಕ್ಷಣೆಯಲ್ಲಿ ನೆಲಸಮಗೊಳಿಸಲಾಯಿತು. ಗ್ರಾಮದ ಮಹಿಳೆಯರು ಕಣ್ಣೀರು ಹಾಕಿದರು. ದೇವಾಲಯದಲ್ಲಿ ಇದ್ದ ಅಮ್ಮನವರ ವಿಗ್ರಹವನ್ನು ಗ್ರಾಮಸ್ಥರಿಗೆ ಒಪ್ಪಿಸಲಾಯಿತು.
‘ಸುಪ್ರೀಂಕೋರ್ಟ್ ಆದೇಶ ನೀಡಿದ್ದರೆ ಹಗಲಿನ ವೇಳೆ ನೆಲಸಮ ಗೊಳಿಸಬಹುದಿತ್ತು. ಗ್ರಾಮಸ್ಥರಿಗೆ ಯಾವುದೇ ನೋಟಿಸ್ ನೀಡದೆ ಕಳ್ಳರಂತೆ ರಾತ್ರಿ ದೇವಾಲಯವನ್ನು ಏಕೆ ಕೆಡವಬೇಕಿತ್ತು’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
‘ಇದು ಚೋಳರ ಕಾಲದ ದೇವಸ್ಥಾನ. ಕಳೆದ 23 ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲಾ ಸೇರಿ ₹60 ಲಕ್ಷ ವೆಚ್ಚದಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು. ಪುರಾತನ ದೇವಾಲಯಗಳನ್ನು ನೆಲಸಮಗೊಳಿಸಬಾರದು ಎಂಬ ನಿಯಮ ಇದ್ದರೂ, ಅಧಿಕಾರಿಗಳು ಕೆಡವಿದ್ದಾರೆ’ ಎಂದು ಗ್ರಾಮದ ಮುಖಂಡ ನರಸಿಂಹೇಗೌಡ ದೂರಿದರು.
ಎರಡು ದಿನ ಶೋಕಾಚರಣೆ
ದೇವಾಲಯವನ್ನು ಕೆಡವಿರುವುದ ರಿಂದ ಗ್ರಾಮದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಮದ ಕೆ.ರಾಜು ತಿಳಿಸಿದರು.
‘ದಾನಿಯೊಬ್ಬರು 5 ಗುಂಟೆ ಜಮೀನು ನೀಡಲಿದ್ದು, ಅಲ್ಲಿ ಮತ್ತೆ ದೇವಾಲಯ ನಿರ್ಮಿಸುತ್ತೇವೆ’ ಎಂದು ಗ್ರಾಮದ ರಾಜಣ್ಣ, ಸಿದ್ದೇಗೌಡ, ಬೇಗೂರೇಗೌಡ ತಿಳಿಸಿದರು.
***
ಇದು ಚೋಳರ ಕಾಲದ ದೇವಸ್ಥಾನವಲ್ಲ. ಕೋರ್ಟ್ ಆದೇಶದಂತೆ ತಾಲ್ಲೂಕಿನಲ್ಲಿ 2 ದೇವಸ್ಥಾನಗಳನ್ನು ಕೆಡವಲಾಗಿದೆ
–ಮೋಹನಕುಮಾರಿ, ತಹಶೀಲ್ದಾರ್, ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.