ಮೈಸೂರು: ಉತ್ತರ ಭಾರತದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳ ಕೈ, ಕಾಲುಗಳನ್ನು ಕತ್ತರಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ಅತ್ಯಾಚಾರ ಮಾಡುವುದು ಅತ್ಯಂತ ಅಮಾನುಷ ಘಟನೆ. ಮಹಿಳೆಯ ದೇಹಕ್ಕೆ 50 ಬಾರಿ ಚಾಕುವಿನಿಂದ ಇರಿಯಲಾಗಿದೆ. ವಿಕೃತವಾಗಿ ಅತ್ಯಾಚಾರ ಎಸಗಲಾಗಿದೆ. ಆದರೆ, ಈ ಅನ್ಯಾಯದ ವಿರುದ್ಧ ದೇಶದಲ್ಲಿ ಯಾರೂ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಅವರು ಹರಿಹಾಯ್ದರು.
‘ಪೊಲೀಸ್ ಅಧಿಕಾರಿಗಳ ಮೇಲೆಯೇ ಇಂತಹ ವಿಕೃತ ಅತ್ಯಾಚಾರ ನಡೆದರೆ, ಇನ್ನು ಸಾಮಾನ್ಯರ ಗತಿ ಏನು’ ಎಂದು ಪ್ರಶ್ನಿಸಿದ ಅವರು, ‘ಅತ್ಯಾಚಾರದಂತಹ ಘಟನೆ ಮತ್ತೆ ಸಂಭವಿಸಬಾರದು ಎಂದಾದರೆ ಸರ್ಕಾರ ಈ ಕೂಡಲೇ ಆರೋಪಿಗಳಿಗೆ ಕ್ರೂರ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ನಾಯಕರ ಹಿತರಕ್ಷಣಾ ವೇದಿಕೆಯ ದ್ಯಾವಪ್ಪ ನಾಯಕ, ಸಂಚಾಲಕ ಪಿ.ರಾಜು, ದೇವರಾಜ ಅರಸು ಸಂಘದ ಡೈರಿ ವೆಂಕಟೇಶ್, ದಲಿತ ಸಂಘರ್ಷ ಸಮಿತಿಯ ಕೆ.ಶಿವಕುಮಾರ್, ಖಾನ್ ರಾಮ್ ರಹಿಮ್ ಕ್ಷೇಮಾಭಿವೃದ್ಧಿಯ ಸಂಘದ ಸೌಕತ್ ಅಲಿಖಾನ್, ಡಾ.ಬಿ.ಆರ್.ಅಂಬೇಡ್ಕರ್ ದಲಿತ ಮಹಿಳಾ ಸಂಘದ ಬಬಿತಾ, ದಲಿತ ಜನ ಜಾಗೃತಿ ಮಹಾಸಭಾದ ಸಿ.ಶ್ರೀನಿವಾಸ್ ಪ್ರಸಾದ್, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಬಸವಣ್ಣ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಆಂತೋಣಿರಾಜ್ ಇದ್ದರು.
ಮೋಂಬತ್ತಿ ಹೊತ್ತಿಸಿ ಪ್ರತಿಭಟನೆ
ಮೈಸೂರು: ಅತ್ಯಾಚಾರ ಘಟನೆ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕಾರ್ಯಕರ್ತರು ಮಂಗಳವಾರ ರಾತ್ರಿ ಇಲ್ಲಿನ ಸೇಂಟ್ ಫಿಲೊಮಿನಾ ಚರ್ಚ್ ವೃತ್ತದಲ್ಲಿ ಮೋಂಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಿದರು.
ಆರೋಪಿಗಳ ಬಂಧನಕ್ಕೆ ಇದುವರೆಗೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ದೂರಿದ ಅವರು, ಇಂತಹ ಘಟನೆ ಮತ್ತೆ ಮರುಕಳಿಸಬಾರದಂತೆ ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.