ADVERTISEMENT

ದೇಗುಲ ಧ್ವಂಸ ವಿರೋಧಿಸಿ ಪ್ರತಿಭಟಿಸಿದವರು ಹಿಂದೂ ತಾಲಿಬಾನಿಗಳು: ಮಹೇಶ್ಚಂದ್ರಗುರು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 13:39 IST
Last Updated 17 ಸೆಪ್ಟೆಂಬರ್ 2021, 13:39 IST
ಪ್ರೊ.ಮಹೇಶ್ವಂದ್ರ ಗುರು
ಪ್ರೊ.ಮಹೇಶ್ವಂದ್ರ ಗುರು   

ಮೈಸೂರು: ‘ದೇವಸ್ಥಾನ ಒಡೆದಿರುವುದನ್ನು ಖಂಡಿಸಿ‌ ಪ್ರತಿಭಟನೆ ‌ನಡೆಸಿದವರು ಹಿಂದೂ‌ ತಾಲಿಬಾನಿಗಳು‘ ಎಂದು‌ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ವಾಗ್ದಾಳಿ ನಡೆಸಿದರು.

’ರೈತರ ಆತ್ಮಹತ್ಯೆ, ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ದನಿಯೆತ್ತದ ಕೆಲವರು, ಇದೀಗ ದೇಗುಲ ಒಡೆದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ‘ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ‌ಕಿಡಿಕಾರಿದರು.

ಮಹಿಷ ದಸರಾ‌ ನಡೆಸಿಯೇ ಸಿದ್ಧ: ’ರಾಷ್ಟ್ರಪ್ರೇಮಿ ವೇಷತೊಟ್ಟ ನಕಲಿ ದೇಶಭಕ್ತರು, ಹಿಂದೂ‌ ತಾಲಿಬಾನಿಗಳಾಗಿದ್ದಾರೆ. ಇಂಥವರು‌ ಮಹಿಷ ದಸರಾ ವಿರೋಧಿಸುತ್ತಿದ್ದಾರೆ. ಇದಕ್ಕೆ, ನಾವು ಅಂಜುವುದಿಲ್ಲ. ಮಹಿಷ ದಸರಾ ನಡೆಸಿಯೇ ಸಿದ್ಧ‘ ಎಂದರು.

ADVERTISEMENT

ಚಾಮುಂಡಿ ನಾಡದೇವತೆಯಲ್ಲ: ‘ದಸರಾ ಸಂದರ್ಭದಲ್ಲಿ ಪೂಜಿಸುವ ಚಾಮುಂಡಿ ನಾಡದೇವತೆಅಲ್ಲ. ’ನಾಡಹಬ್ಬ– ಹುಟ್ಟು ಬೆಳವಣಿಗೆ‘ ಕುರಿತು 1962ರ ದಸರಾ ಸಂಚಿಕೆಯಲ್ಲಿ ವರಕವಿ ಬೇಂದ್ರೆ ಲೇಖನ ಬರೆದಿದ್ದು, ’ನಾಡದೇವತೆ ಜೈ ಭುವನೇಶ್ವರಿ‘ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ವಿಜಯನಗರ ಸಂಸ್ಥಾನದವರು ಮಹಾನವಮಿ ದಿಬ್ಬದಲ್ಲಿ ’ಭುವನೇಶ್ವರಿ ದೇವಿ‘ ಪೂಜಿಸುತ್ತಿದ್ದರು‘ ಎಂದು ಲೇಖಕ ಸಿದ್ಧಸ್ವಾಮಿ ಹೇಳಿದರು.

’ಚಾಮುಂಡೇಶ್ವರಿ ಮೈಸೂರು ಸಂಸ್ಥಾನಕ್ಕೆ ಸೇರಿದವಳಲ್ಲ. ಚಂಡ–ಮುಂಡರನ್ನು ಸಂಹರಿಸಿ, ಅವರ ಹೆಸರನ್ನು ತನಗೆ ಇಟ್ಟುಕೊಳ್ಳುತ್ತಾಳೆ. ಈ ಯುದ್ಧ ನಡೆದಿರುವುದು ಹಿಮಾಲಯದಲ್ಲಿ. ಆ ರೀತಿ ಇರುವಾಗ, ಚಾಮುಂಡೇಶ್ವರಿ ಕರ್ನಾಟಕದವಳು ಹೇಗಾಗುತ್ತಾಳೆ‘ ಎಂದು ತಮ್ಮ ಸಂಶೋಧನೆಯ ’ಮಹಿಷಾಮಂಡಲ‘ ಕೃತಿ ಪ್ರದರ್ಶಿಸಿದರು.

’ಮಹಿಷಾಸುರ ಅವಧಿಯಲ್ಲಿ ಮಾತೃ ಸಂಸ್ಕೃತಿಯಿತ್ತು. ಮಾರಮ್ಮನಿಗೆ ಪೂಜೆ ಸಲ್ಲಿಸುವ ಪದ್ಧತಿಯಿತ್ತು. ಮಾರಮ್ಮನ ಪೂಜೆ ಸಲ್ಲಿಸಿದ ಊರು, ಮೈಸೂರು ಆಗಿ ಬದಲಾಗಿದೆ‘ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.