ಶಕ್ತಿನಗರ: ಬರಗಾಲದಿಂದ ಬೆಳೆಗಳು ಕೈಕೊಟ್ಟಾಗ, ಎಮ್ಮೆಗಳ ಸಾಕಾಣಿಕೆ ಮಾಡಿಕೊಂಡಿರುವ ದೇವಸೂಗೂರು ಹೋಬಳಿ ವ್ಯಾಪ್ತಿಯ ಯರಗುಂಟ ಗ್ರಾಮದ ತಿಮ್ಮಪ್ಪ ಅಡಿಬಾಯ್ ಅವರು ಯಶಸ್ಸು ಕಂಡಿದ್ದಾರೆ.
1999 ರಲ್ಲಿ ಸಾಲ ಮಾಡಿ ₹20 ಸಾವಿರ ರೂಪಾಯಿಗೆ ನಾಲ್ಕು ಎಮ್ಮೆಗಳನ್ನು ಖರೀದಿಸಿ ಹೈನುಗಾರಿಕೆ ಆರಂಭಿಸಿದರು. ಡಿ.ರಾಂಪುರ ಮತ್ತು ಯರಮರಸ್ ಬೈಪಾಸ್ ರೈತರ ಜಮೀನುಗಳಲ್ಲಿ ಸಿಗುವ ಕೃಷಿ ತ್ಯಾಜ್ಯಗಳು, ಬದುಗಳ ಮೇಲೆ ಬೆಳೆದ ಹುಲ್ಲು ತೆಗೆದುಕೊಂಡು ಬರುತ್ತಿದ್ದರು. ಸುತ್ತಮುತ್ತಲೂ ಸಿಗುವ ಮೇವನ್ನು ಅವಲಂಭಿಸಿ ಎಮ್ಮೆಗಳ ಸಾಕಣೆ ಮುಂದುವರೆಸಿದರು. ಇದನ್ನೇ ಜೀವನಕ್ಕೆ ಆಧಾರ ಮಾಡಿಕೊಂಡರು. ಹೀಗೆ ನಾಲ್ಕು ಎಮ್ಮೆಗಳಿಂದ ಪ್ರಾರಂಭವಾದ ತಿಮ್ಮಪ್ಪ ಅವರ ಹೈನುಗಾರಿಕೆ ಇಂದು ಅವರಲ್ಲಿ 30 ಎಮ್ಮೆಗಳು, 10 ಎಮ್ಮೆ ಕರುಗಳಿವೆ.
ಉತ್ತಮ ಸಾಕಾಣಿಕಾ ವಿಧಾನಗಳ ಅಳವಡಿಕೆಯಿಂದ ಪ್ರತಿ ವರ್ಷ ಎಮ್ಮೆ ಕರು ಹಾಕುವಂತೆ ನೋಡಿಕೊಳ್ಳುತ್ತಾರೆ. ಹಾಗಾಗಿ ಯಾವುದೇ ಹೊರಗಿನ ಬಂಡವಾಳವಿಲ್ಲದೆ ತಮ್ಮಲ್ಲೇ ಎಮ್ಮೆಗಳ ಸಂತಾನ ಅಭಿವೃದ್ಧಿ ಮಾಡಿಕೊಂಡಿದ್ದಾರೆ.ಇಬ್ಬರು ಮಕ್ಕಳು ಸೇರಿ ಕುಟುಂಬದ ಮೂವರು ಸದಸ್ಯರೇ ಹೈನುಗಾರಿಕೆಯ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ಆಳುಗಳ ಮೇಲಿನ ಅವಲಂಬನೆಯಾಗಿಲ್ಲ.
₹1 ಲಕ್ಷ ವೆಚ್ಚದಲ್ಲಿ ಮೇವು ಮತ್ತು ₹1.20 ಲಕ್ಷ ವೆಚ್ಚದಲ್ಲಿ ಸಿಪ್ಪೆ ಖರೀದಿಸಿದ್ದಾರೆ. ₹50 ಸಾವಿರ ರೂಪಾಯಿದಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ₹1 ಲಕ್ಷ ವೆಚ್ಚದಲ್ಲಿ ಬೋರ್ವೆಲ್ ಹಾಕಿಕೊಂಡು ಎಮ್ಮೆಗಳ ಕುಡಿಯುವ ನೀರಿಗಾಗಿ ತೊಟ್ಟಿಯಲ್ಲಿ ನೀರಿನ ಸಂಗ್ರಹ
ಮಾಡಿಕೊಂಡಿದ್ದಾರೆ.
ಐಸಿಐಸಿ ಬ್ಯಾಂಕ್ನಲ್ಲಿ ₹1.20 ಲಕ್ಷ ಸಾಲ ಮತ್ತು ನಬಾರ್ಡ್ ಬ್ಯಾಂಕ್ನಲ್ಲಿ ₹1 ಲಕ್ಷ ಸಾಲ ಮಾಡಿ,ಒಟ್ಟು ₹2.20 ಲಕ್ಷ ವೆಚ್ಚದಲ್ಲಿ ಹರಿಯಾಣದ ಎರಡು ಪ್ರತ್ಯೇಕ ಹೊಸ ಎಮ್ಮೆಗಳು ಖರೀದಿಸಿದ್ದು,ಅವುಗಳಿಗೆ ದಿನಕ್ಕೆ ಎರಡು ಚೀಲ ಹತ್ತಿ ಕಾಳು ಹಿಂಡು,ಗೋಧಿಯ ಪುಡಿ ಹಿಟ್ಟು ಹಾಕುತ್ತಾರೆ.
30 ಎಮ್ಮೆಗಳು ಸೇರಿ ದಿನಕ್ಕೆ 200 ಲೀಟರ್ ಹಾಲು ಎಮ್ಮೆಗಳು ನೀಡುತ್ತೇವೆ. ಆ ಹಾಲು ರಾಯಚೂರು ನಗರ ಸೇರಿದಂತೆ ದೇವಸೂಗೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಾರೆ. ಬದ್ಧತೆಯಿಂದ ಎಮ್ಮೆ ಸಾಕಾಣಿಕೆ ಮಾಡುತ್ತಿರುವ ತಿಮ್ಮಪ್ಪ ಅಡಿಬಾಯ್ ಇತರ ರೈತರಿಗೆ ಮಾದರಿಯಾಗಿದ್ದಾರೆ.
‘ಶೆಡ್ ನಿರ್ಮಾಣ, ನೀರಿನ ತೊಟ್ಟಿ ನಿರ್ಮಿಸಿಕೊಂಡು ಎಮ್ಮೆಗಳ ಸಾಕಾಣಿಕೆ ಮಾಡಿಕೊಳ್ಳುತ್ತಿರುವ ತಿಮ್ಮಪ್ಪ ಅವರಿಗೆ ಸಗಮಕುಂಟ ಗ್ರಾಮ ಪಂಚಾಯಿತಿ ಆಡಳಿತದಿಂದ ಪ್ರೋತ್ಸಾಹ ಧನ ಕೊಡಿಸಲಾಗುವುದು’ ಎಂದು ಯರಗುಂಟ ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮೀ ಅವರು ಹೇಳಿದರು.
ನರೇಗಾ ಯೋಜನೆಯಡಿ ಗಂಜಳಾ ಸಂಗ್ರಹ ತೊಟ್ಟಿ, ಕೃಷಿ ಇಲಾಖೆ ವತಿಯಿಂದ ಕೃಷಿ ಹೊಂಡನಿರ್ಮಾಣಕ್ಕೆ ಅವರಿಗೆ ಅನುಕೂಲ ಮಾಡಿಕೊಡುವುದಾಗಿ ಎಂದು ಅವರು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.