ರಾಯಚೂರು: ಸಮಾಜದಲ್ಲಿ ಎಲ್ಲ ರೀತಿಯಿಂದಲೂ ಹಿಂದುಳಿದಿರುವ ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಯುವ ಘಟಕದಿಂದ ಶನಿವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದ ಎದುರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿ, ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು.
ಎಸ್ಟಿ ಮೀಸಲಾತಿ ಕಲ್ಪಿಸಲು ಕೂಡಲೇ ವಿಶ್ವಕರ್ಮ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕೆ ಕ್ರಮ ವಹಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಸಮಾಜದ ಬೇಡಿಕೆಯನ್ನು ಕಡೆಗಣಿಸಬಾರದು ಎಂದರು.
ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಿಲ್ಲದೆ ಆರು ತಿಂಗಳುಗಳಾಗಿವೆ. ಸಮಾಜದ ಪ್ರತಿನಿಧಿ ಕೆ.ಪಿ.ನಂಜಂಡಿ ಅವರಿಗೂ ಸಚಿವ ಸ್ಥಾನ ನೀಡಲಿಲ್ಲ. ವಿಶ್ವಕರ್ಮ ಸಮಾಜವನ್ನು ಸಮಾಜ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಬಡಿಗೇರ್, ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗಿರೀಶ್ ಆಚಾರ್, ರಾಜ್ಯ ಕಾರ್ಯದರ್ಶಿ ಲೋಹಿತ್ ಕಲ್ಲೂರು ಮತ್ತು ಬ್ರಹ್ಮ ಗಣೇಶ್, ಜಿಲ್ಲಾ ಯುವ ಅಧ್ಯಕ್ಷ ಗುರುಮಡ್ಡಿಪೇಟೆ ಮಲ್ಲಿಕಾರ್ಜುನ ಸಿರವಾರ, ನಾಮನಿರ್ದೇಶಕರಾದ ಎಸ್.ರವೀಂದ್ರ ಕುಮಾರ್, ವೀರೇಶ್ ಜಲಾಲ್ ನಗರ, ಕೊಂಡಾಪುರ್ ವೆಂಕಟೇಶ್, ಈಶ್ವರ್, ಶ್ರೀಕಾಂತ್, ಮೌನೇಶ ವಡವಾಟಿ, ವಿನೋದ್ ವಲ್ಕಂದಿನ್ನಿ. ಪ್ರಕಾಶ್ ಗುಂಜಳ್ಳಿ, ಮನೋಹರ್ ಬಡಿಗೇರ, ಬ್ರಹ್ಮಯ್ಯ, ರಾಮು ಯಾಪಲದಿನ್ನಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.