ಮಾಗಡಿ: ‘ನಾನು ರೈತರ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತಿದ್ದೇನೆ. ಯಾರ ಮುಖವಾಡ ಅಲ್ಲ’ ಎಂದು ತಾ.ಪಂ ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್ ತಿಳಿಸಿದರು.
ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ಅವರು ಕೈಗಾರಿಕೆಗೆ ಸ್ಥಾಪನೆಗೆ ಚಿತಾವಣೆ ಮಾಡಿ ನನ್ನ ಮೂಲಕ ಹೋರಾಟ ಮಾಡಿಸುತ್ತಿದ್ದಾರೆ ಎಂದು ಶಾಸಕ ಎ.ಮಂಜುನಾಥ್ ಸುಳ್ಳು ಆರೋಪ ಮಾಡಿದ್ದಾರೆ. ಕೈಗಾರಿಕೆ ಪ್ರದೇಶದ ಪಕ್ಕದಲ್ಲಿಯೇ ನಮ್ಮ ಕುಟುಂಬದ ಜಮೀನಿದ್ದು ಅದನ್ನು ವಶಪಡಿಸಿಕೊಳ್ಳುತ್ತಾರೆ ಎಂಬ ಆತಂಕ ನಮ್ಮದಾಗಿದೆ’ ಎಂದರು.
‘ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಬಂದರೆ ರೈತರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ನೀರು ತರುವ ವಿಚಾರದಲ್ಲಿ ಶಾಸಕರ ಬಗ್ಗೆ ವಿಶ್ವಾಸವಿಟ್ಟಿದ್ದೆವು. ಮಾಜಿ ಶಾಸಕರ ಅವಧಿಯಲ್ಲಿ ಆಗಿರುವ ಅಭಿವೃದ್ಧಿಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿದಿದೆ. ಈಗಿನ ಶಾಸಕರು ಪ್ರಭಾವ ಬೀರಿ ದಾಬಸ ಪೇಟೆ ಮತ್ತು ಬಿಡದಿ ವಲಯದ ಕೈಗಾರಿಕೆಗಳಲ್ಲಿ ಶಿವನಸಂದ್ರ, ಬೆಣ್ಣಪ್ಪನಪಾಳ್ಯ, ನಾರಸಂದ್ರ, ಮರೂರು ಭಾಗದ ಯುವಕರಿಗೆ ಉದ್ಯೋಗ ಕೊಡಿಸಬೇಕು’ ಎಂದರು.
‘ಕೈಗಾರಿಕೆ ಆರಂಭಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಫಲವತ್ತಾದ ರೈತರ ಜಮೀನಿನಲ್ಲಿ ಕೈಗಾರಿಕೆ ಆರಂಭಿಸುವ ಬದಲು ಗೋಮಾಳದ ಜಮೀನಿನಲ್ಲಿ ಕೈಗಾರಿಕೆ ಮಾಡಬೇಕು. ಕೃಷಿಗೆ ಪೂರಕವಾದ ಗುಡಿಕೈಗಾರಿಕೆಗಳನ್ನು ಆರಂಭಿಸಲಿ ರೈತರ ಅಭ್ಯಂತರವಿಲ್ಲ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮುಂದುವರಿಸಿದರೆ, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ’ ಎಂದರು.
ಜಿ.ಶಂಕರಪ್ಪ, ಗ್ರಾ.ಪಂ ಸದಸ್ಯ ಎಚ್.ರಾಮಕೃಷ್ಣಯ್ಯ, ಮರೂರು ಕುಮಾರ್, ಮಂಜುನಾಥ್, ದಯಾನಂದ್, ದೀಪು, ಮೂರ್ತಿ, ಚಿದಾನಂದ್, ವಿಶ್ವಾಸ್, ವೆಂಕಟೇಶ್, ಮುನಿರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.