ADVERTISEMENT

ಸತ್ತ ಕೋಳಿ ದುರ್ಗಂಧ ರೈತರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:04 IST
Last Updated 22 ಸೆಪ್ಟೆಂಬರ್ 2021, 4:04 IST
ಮಾಗಡಿಯ ಸುಂಕುತಿಮ್ಮನಪಾಳ್ಯದ ಜಮೀನಿನಲ್ಲಿ ಸತ್ತ ಕೋಳಿಗಳನ್ನು ಹೂತು ಹಾಕಿ ಕಲ್ಮಶಗೊಂಡಿರುವ ಪ್ರದೇಶ ತೋರಿಸುತ್ತಿರುವ ನರಸಿಂಹಮೂರ್ತಿ
ಮಾಗಡಿಯ ಸುಂಕುತಿಮ್ಮನಪಾಳ್ಯದ ಜಮೀನಿನಲ್ಲಿ ಸತ್ತ ಕೋಳಿಗಳನ್ನು ಹೂತು ಹಾಕಿ ಕಲ್ಮಶಗೊಂಡಿರುವ ಪ್ರದೇಶ ತೋರಿಸುತ್ತಿರುವ ನರಸಿಂಹಮೂರ್ತಿ   

ಮಾಗಡಿ: ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ರೋಗದಿಂದ ಸತ್ತ ಕೋಳಿಗಳನ್ನು ನಮಗೆ ಸೇರಿರುವ ಭೂಮಿಯಲ್ಲಿ ಗುಂಡಿ ತೆಗೆದು ಮುಚ್ಚಿದ್ದು, ಮಣ್ಣು ಮತ್ತು ಅಂತರ್ಜಲ ಕಲುಷಿತಗೊಳ್ಳುತ್ತಿದೆ ಎಂದು ಸುಂಕುತಿಮ್ಮನಪಾಳ್ಯದ ರೈತ ನರಸಿಂಹಮೂರ್ತಿ ದೂರಿದರು.

ಭಾನುವಾರ ಮೇಲನಹಳ್ಳಿ ಸರ್ವೆ ನಂ. 20/1ರಲ್ಲಿ ಕೋಳಿ ಸಾಕಾಣಿಕೆದಾರರು ಗುಂಡಿ ತೆಗೆದು ಅರ್ಧಕಲ್ಲು ಮುಚ್ಚಿರುವುದರಿಂದ ಹೊರಬಂದಿರುವ ಕೋಳಿಯ ಅವಯವಗಳನ್ನು ತೋರಿಸಿ ಅವರು ಮಾತನಾಡಿದರು.

‘ನಮ್ಮ ಸಂಬಂಧಿಕರು ಅವರ ಜಮೀನಿನಲ್ಲಿ ಕೋಳಿ ಸಾಕಾಣಿಕೆ ಕೇಂದ್ರ ಮಾಡಿಕೊಂಡಿದ್ದಾರೆ. ಅವರು ಸಾಕಾಣಿಕೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಈಚೆಗೆ ರೋಗದಿಂದ ಸತ್ತ ಸಹಸ್ರಾರು ಕೋಳಿಗಳನ್ನು ನಮಗೆ ಸೇರಿರುವ ಭೂಮಿಯಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದಾರೆ. ಕೊಳೆತ ಕೋಳಿಗಳಿಂದ ಹೊರಬರುವ ದುರ್ಗಂಧದಿಂದ ಹೊಲದಲ್ಲಿ ವ್ಯವಸಾಯ ಮಾಡಲು ಅಡ್ಡಿಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಈ ಪ್ರದೇಶದಲ್ಲಿ ಹರಡಿರುವ ದುರ್ಗಂಧದಿಂದ ಅಡಿಕೆ ಮತ್ತು ಇತರೆ ಬೆಳೆಗಳಲ್ಲಿ ಕೆಲಸ ಮಾಡಲು ಕೂಲಿಯವರು ಬರದಂತಾಗಿದೆ. ಅವರ ಜಮೀನಿನಲ್ಲಿ ಸತ್ತ ಕೋಳಿಗಳನ್ನು ಹೂತು ಹಾಕಲಿ. ನಮಗೆ ತೊಂದರೆ ಕೊಡುವುದು ಬೇಡ’ ಎಂದು ರೈತರಾದ ಚಂದ್ರು, ಲಕ್ಷ್ಮಮ್ಮ ಮುನಿಯಪ್ಪ ಮನವಿ ಮಾಡಿದರು.

ಸ್ಪಷ್ಟನೆ: ‘ಮೈಲನಹಳ್ಳಿ ಸುಂಕುತಿಮ್ಮನಪಾಳ್ಯದ ಸರ್ವೆ ನಂ. 20/1, 11/1ರ ಸರ್ವೆ ಮಾಡಿಸಲಿ. ಚನ್ನಮ್ಮ ಲೇಟ್‌ ತಿಮ್ಮಯ್ಯ ಅವರಿಗೆ ಸೇರಿದ್ದರೆ ಆ ಭೂಮಿಯಲ್ಲಿ ನಾವು ಸತ್ತ ಕೋಳಿಗಳನ್ನು ಗುಂಡಿಗೆ ಹಾಕುವುದಿಲ್ಲ’ ಎಂದು ಕೋಳಿ ಸಾಕಾಣಿಕೆ ಕೇಂದ್ರದ ಮಾಲೀಕರಾದ ನಾರಾಯಣ, ನಾಗರಾಜು ತಿಳಿಸಿದರು.

‘ಚೆನ್ನಮ್ಮ ಮತ್ತು ಮಕ್ಕಳು ಬೆಳೆಸಿರುವ ಮರಗಳಿಂದ ನಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳಿಗೆ ತೊಂದರೆಯಾಗಿದೆ. ನಾವು
ನಮಗೆ ಸೇರಿರುವ ಸರ್ವೆ ನಂ. 10ರಲ್ಲಿ ಗುಂಡಿ ತೆಗೆದು ಸತ್ತ ಕೋಳಿ
ಗಳನ್ನು ಮುಚ್ಚಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.