ADVERTISEMENT

ಆರ್.ಅಶೋಕ್ ಹೇಳಿಕೆ ಖಂಡನೀಯ: ಜಿಲ್ಲಾ ಅಡಿಕೆ ಬೆಳೆಗಾರರ ಸಂಘ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 11:53 IST
Last Updated 22 ಸೆಪ್ಟೆಂಬರ್ 2021, 11:53 IST
ಕಂದಾಯ ಸಚಿವ ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ್   

ಶಿವಮೊಗ್ಗ: ಅನಧಿಕೃತವಾಗಿ ಸಾಗುವಳಿ ಮಾಡಿದ ಸೊಪ್ಪಿನ ಬೆಟ್ಟ ಹಾಗೂ ಕಾನುಗಳ ಹಕ್ಕು ಮಂಜೂರಾತಿಗೆ ಅವಕಾಶವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಅಧಿವೇಶನದಲ್ಲಿ ನೀಡಿದ ಹೇಳಿಕೆ ಖಂಡನೀಯ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದ ವಿಶೇಷ ಹಕ್ಕು ಹೊಂದಿರುವ ಭೂಮಿಗಳಾದ ಸೊಪ್ಪಿನ ಬೆಟ್ಟ, ಕಾನು, ಕುಮ್ಕಿ ಬೆಟ್ಟ, ಜಮ್ಮಾ ಬಾಣೆ ಹಾಗೂ ಮೋಟಸ್ಥಲ್ ತಳಿ ಭೂಮಿಗಳ ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅವಕಾಶ ನೀಡಬೇಕು. ಕಂದಾಯ ಸಚಿವರ ಹೇಳಿಕೆಯಿಂದ ಸಾವಿರಾರು ಬಗರ್ ಹುಕುಂ ಸಾಗುವಳಿದಾರರು ಸಾಗುವಳಿ ಭೂಮಿ ಹಾಗೂ ವಸತಿ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಭೂಮಿ ಕಳೆದುಕೊಂಡು ನಿರ್ಗತಿಕರಾಗುವರು ಎಂದು ಸಂಘದ ಅಧ್ಯಕ್ಷ ಬಿ.ಎ.ರಮೇಶ್‌ ಹೆಗ್ಡೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ಸರ್ಕಾರದ ಧೋರಣೆಯಿಂದ ಶ್ರೀಮಂತರಿಗೆ, ರಿಯಲ್‌ಎಸ್ಟೇಟ್‌ ಕುಳಗಳಿಗೆ ಅನುಕೂಲವಾಗುತ್ತದೆ. 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ವಿಶೇಷ ಹಕ್ಕಿನ ಭೂಮಿಗಳನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಮಂಜೂರಾತಿ ಮಾಡಲು ಸಾಧ್ಯವಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದರು. ಈಗ ಕಂದಾಯ ಸಚಿವರ ಹೇಳಿಕೆ ಬಿಜೆಪಿ ಸರ್ಕಾರದ ಭೂ ಹಕ್ಕಿನ ವಿರೋಧಿ ಧೋರಣೆ ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.

ADVERTISEMENT

ಸರ್ಕಾರ ಹೊರಡಿಸಿರುವ ಸುತ್ತೋಲೆ ವಾಪಸ್‌ ಪಡೆಯಬೇಕು. ಈಗಾಗಲೇ ಅನಧಿಕೃತ ಸಾಗುವಳಿ ಮಾಡುವ, ಜನರು ವಾಸಿಸುತ್ತಿರುವ ಭೂಮಿ ಸಕ್ರಮಕ್ಕೆ ಅವಕಾಶ ಕೊಡಬೇಕು. ಅರ್ಜಿ ಸಲ್ಲಿಸಿರುವ ರೈತರ ರಕ್ಷಣೆಗಾಗಿ ಅಗತ್ಯ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.