ADVERTISEMENT

ಸರ್ವೀಸ್ ರಸ್ತೆ ನಿರ್ಮಾಣ: ಮುಂದುವರಿದ ಗದ್ದಲ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:00 IST
Last Updated 14 ಸೆಪ್ಟೆಂಬರ್ 2021, 7:00 IST
ತುಮಕೂರು ವಾಲ್ಮೀಕಿ ನಗರದ ಸರ್ವೀಸ್ ರಸ್ತೆ ನಿರ್ಮಾಣ ಸ್ಥಳದಲ್ಲಿ ಸೇರಿದ್ದ ಜನರು
ತುಮಕೂರು ವಾಲ್ಮೀಕಿ ನಗರದ ಸರ್ವೀಸ್ ರಸ್ತೆ ನಿರ್ಮಾಣ ಸ್ಥಳದಲ್ಲಿ ಸೇರಿದ್ದ ಜನರು   

ತುಮಕೂರು: ನಗರದ ಬಿ.ಎಚ್. ರಸ್ತೆಗೆ ಹೊಂದಿಕೊಂಡಿರುವ ಎಸ್‌ಐಟಿ ಮುಂಭಾಗದ ವಾಲ್ಮೀಕಿ ನಗರದ ಸರ್ವೀಸ್ ರಸ್ತೆಯನ್ನು ನಿಯಮಾನುಸಾರ ವಿಸ್ತರಣೆ ಮಾಡುವಂತೆ ಬಡಾವಣೆಯ ನಾಗರಿಕರು ಒತ್ತಾಯಿಸಿದರು.

ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸೋಮವಾರ ಬಂದ ವಾಲ್ಮೀಕಿ ನಗರ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು, ನಾಗರಿಕರು ‘ಈಗಾಗಲೇ ರಸ್ತೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಅದನ್ನು ತೆರವುಗೊಳಿಸಿ ನಿಯಮಾನುಸಾರ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು.

ರಸ್ತೆ ವಿಸ್ತರಣೆ ಕಾರ್ಯ ಮುಖ್ಯರಸ್ತೆಯ ಮಧ್ಯಭಾಗದಿಂದ ನಡೆಯುತ್ತಿದ್ದು, ಈ ಕೆಲಸ ರಸ್ತೆಯ ತುದಿಯಿಂದಲೇ ಆರಂಭಿಸಬೇಕು. ಬಲಾಢ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಧ್ಯಭಾಗದಲ್ಲಿ ಕಾಮಗಾರಿ ಮಾಡುತ್ತಿದ್ದು, ತಾರತಮ್ಯ ಮಾಡಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಟಿ.ಸಿ. ದೊಡ್ಡಬಸಪ್ಪ ಆರೋಪಿಸಿದರು.

ADVERTISEMENT

ಸಿಡಿಪಿ ಪ್ರಕಾರ ರಸ್ತೆ ವಿಸ್ತರಣೆ ಮಾಡಬೇಕು. ಸರ್ವೀಸ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇಂತಹ ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕರು, ವಾಹನಗಳ ಓಡಾಟಕಷ್ಟಕರವಾಗಿದೆ ಎಂದು ಹೇಳಿದರು.

ತಾರತಮ್ಯ ಮಾಡದೆ ನ್ಯಾಯಯುತವಾಗಿ ಕಾಮಗಾರಿ ಮುಂದುವರಿಸಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಎಂಬ ತಾರತಮ್ಯ ಮಾಡಬಾರದು. ನಮ್ಮ ಅಕ್ಕಪಕ್ಕದ ಅಂಗಡಿಗಳನ್ನು ಮೊದಲು ತೆರವುಗೊಳಿಸಿದರೆ ನಮ್ಮ ಅಂಗಡಿಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ. ತಾರತಮ್ಯ ಮಾಡಿದರೆಬಿಟ್ಟು ಕೊಡುವುದಿಲ್ಲ ಎಂದು ಕೆಲವು ಅಂಗಡಿಗಳ ಮಾಲೀಕರು ಎಚ್ಚರಿಸಿದರು.

ರಸ್ತೆಯ ಮೂಲದಿಂದ ಕಾಮಗಾರಿ ನಡೆಸದೆ ಮಧ್ಯದಲ್ಲಿ ಬಂದು ತೊಂದರೆ ಕೊಡುತ್ತಿದ್ದಾರೆ. 1ರಿಂದ 3ರವರೆಗೆ ಬಿಟ್ಟು, 4ನೇ ಪಾಯಿಂಟ್‍ಗೆ ಬಂದು ಕಾಮಗಾರಿ ಮಾಡಲಾಗುತ್ತಿದೆ. ನಮ್ಮ ಅಂಗಡಿಯನ್ನು ಮಾತ್ರ ಗುರಿ ಮಾಡಲಾಗಿದೆ. ರಸ್ತೆಯ ತುದಿಯಿಂದ ಕೆಲಸ ಮಾಡಿಕೊಂಡು ಬಂದರೆ ನಮ್ಮ ಅಂಗಡಿ ಸ್ಥಳವನ್ನು ಬಿಟ್ಟು ಕೊಡಲಾಗುವುದು. ಇಲ್ಲವಾದರೆ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ. ಜೆಸಿಬಿ ಮುಂದೆ ತಲೆ ಕೊಡುತ್ತೇನೆ ಎಂದು ಅಂಗಡಿ ಮಾಲೀಕ ಕೆಂಪನರಸಯ್ಯ ಅಳಲು ತೋಡಿಕೊಂಡರು.

22ನೇ ವಾರ್ಡ್ ಪಾಲಿಕೆ ಸದಸ್ಯ ಶ್ರೀನಿವಾಸ್, ‘ಈ ಭಾಗದಲ್ಲಿ ಓಡಾಡಲು ಜನತೆಗೆ ಇರುವುದು ಇದೊಂದೇ ರಸ್ತೆ. ಒತ್ತುವರಿ ತೆರವುಗೊಳಿಸಲಾಗುವುದು. ಅಂಗಡಿ ತೆರವಿಗೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಮಾಲೀಕರು ಕೇಳುತ್ತಿದ್ದಾರೆ. ಇನ್ನೂ ಸ್ವಲ್ಪ ದಿನ ಕಾಲಾವಕಾಶ ಕೊಟ್ಟು ಒತ್ತುವರಿ ತೆರವು ಮಾಡಿದ ನಂತರ ಕಾಮಗಾರಿ ಆರಂಭವಾಗಲಿದೆ’ ಎಂದು
ತಿಳಿಸಿದರು.

ವಾಲ್ಮೀಕಿ ನಗರ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪ್ರಸನ್ನಕುಮಾರ್, ಸದಸ್ಯರಾದ ವೆಂಕಟೇಶ್, ಶಿವಕುಮಾರ್, ತೋಂಟದಾರಾಧ್ಯ, ವಿನಯ್, ಟಿ.ಸಿ. ಮಂಜುನಾಥ್, ಒಡೆಯರ್, ಲಕ್ಷ್ಮಣಗೌಡ, ರಾಜೇಶ್, ಮಂಜುನಾಥ್, ಗಿರೀಶ್, ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.