ADVERTISEMENT

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಅಗತ್ಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 16:38 IST
Last Updated 5 ಸೆಪ್ಟೆಂಬರ್ 2021, 16:38 IST
ಕೊರಟಗೆರೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಾ.ಜಿ. ಪರಮೇಶ್ವರ ಉದ್ಘಾಟಿಸಿದರು. ತಹಶೀಲ್ದಾರ್ ನಾಹಿದಾ ಜಮ್ ಜಮ್, ತಾ.ಪಂ. ಇಒ ಎಸ್.ಶಿವಪ್ರಕಾಶ್ ಇದ್ದರು
ಕೊರಟಗೆರೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಾ.ಜಿ. ಪರಮೇಶ್ವರ ಉದ್ಘಾಟಿಸಿದರು. ತಹಶೀಲ್ದಾರ್ ನಾಹಿದಾ ಜಮ್ ಜಮ್, ತಾ.ಪಂ. ಇಒ ಎಸ್.ಶಿವಪ್ರಕಾಶ್ ಇದ್ದರು   

ಕೊರಟಗೆರೆ: ಶಿಕ್ಷಕರ ಜವಾಬ್ದಾರಿ ನೌಕರಿಗೆ ಸೀಮಿತವಾಗಬಾರದು. ಸಮಾಜ ಕಟ್ಟುವ ಕಾಯಕವೂ ಆಗಬೇಕು. ಶಿಕ್ಷಕರು ನಿತ್ಯ ಉತ್ಕೃಷ್ಟ ಶಿಕ್ಷಣ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಶಾಸಕ ಡಾ.ಜಿ. ಪರಮೇಶ್ವರ ಹೇಳಿದರು.

ಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಕಲೆಯೂ ಹೌದು. ಪ್ರತಿ ಶಿಕ್ಷಕರು ನಿತ್ಯ ವಿದ್ಯಾರ್ಥಿಗಳಾಗಬೇಕು. ಹೊಸತನವನ್ನು ಅಭ್ಯಾಸಿಸಿ ಪ್ರತಿ ವಿಷಯಕ್ಕೂ ಜೀವ ತುಂಬಬೇಕು. ಪ್ರತಿ ತರಗತಿಯಲ್ಲೂ ಹೊಸತನ ಕಲಿಸಬೇಕು ಎಂದರು.

ADVERTISEMENT

ದೇಶದಲ್ಲಿ 600ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ನೀಡುತ್ತಿದ್ದರೂ, ಭಾರತದ ಯಾವುದೇ ವಿಶ್ವವಿದ್ಯಾಲಯ ಪ್ರಪಂಚದ 100 ಅತ್ಯುತ್ತಮ ವಿಶ್ವವಿದ್ಯಾಲಯ ಪಟ್ಟಿಗಳಲ್ಲಿ ಬರದಿರುವುದು ದುರಾದೃಷ್ಟಕರ. ಆಧುನಿಕ ಶಿಕ್ಷಣ ಭಾರತದಲ್ಲಿ ದೊರೆಯುತ್ತಿದ್ದರೂ, ಅದು ಪ್ರಪಂಚದ ಶಿಕ್ಷಣದ ವೇಗಕ್ಕೆ ಹೋಲಿಸದರೆ ಹಿಂದೆ ಇದೆ. ಸರ್ಕಾರಗಳು ಶಿಕ್ಷಣ
ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೊಳಿಸಿದರೆ ವಿಶ್ವವಿದ್ಯಾನಿಲಯಗಳು ಅತ್ಯುನ್ನತ ಪಟ್ಟಿಗೆ ಸೇರ್ಪಡೆಯಾಗುತ್ತದೆ ಎಂದರು.

ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ, ಶಿಕ್ಷಣ ಕೇವಲ ಅಂಕಗಳಿಕೆಗೆ ಸೀಮಿತವಾಗದೇ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿ. ಆ ಮೂಲಕ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಿದೆ ಎಂದರು.

ಬಿಇಒ ಎನ್.ಎಸ್.ಸುಧಾಕರ್ ಮಾತನಾಡಿದರು. ಬಿಆರ್‌ಸಿ ಸುರೇಂದ್ರನಾಥ್, ಅಕ್ಷರ ದಾಸೋಹ ಅಧಿಕಾರಿ ಟಿ.ಆರ್.ರಘು, ತಾ.ಪಂ. ಇಒ ಎಸ್.ಶಿವಪ್ರಕಾಶ್, ನೌಕರರ ಸಂಘದ ಅಧ್ಯಕ್ಷ ಎಚ್.ಎಂ. ರುದ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಪಟ್ಟಣ
ಪಂಚಾಯಿತಿ ಸದಸ್ಯ ಎ.ಡಿ.ಬಲರಾಮಯ್ಯ, ಪಿಎಸ್‌ಐ ನಾಗರಾಜು, ಶಿಕ್ಷಕರಾದ ತಿಪ್ಪೇಸ್ವಾಮಿ, ಈಶ್ವರಯ್ಯ, ಲಕ್ಷ್ಮೀಪುತ್ರ, ಪರಮೇಶ್ವರ, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.