ಪಾವಗಡ: ಹಿಂದಿ ದಿವಸ್ ಆಚರಣೆ, ಹಿಂದಿ ಭಾಷಾ ಹೇರಿಕೆ ಖಂಡಿಸಿ ತಹಶೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ಜೆಡಿಎಸ್ ತಾಲ್ಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯಾವುದೇ ಭಾಷೆಯನ್ನು ಬಲವಂತವಾಗಿ ಬಳಸುವಂತೆ, ಕಲಿಯುವಂತೆ ಒತ್ತಡ ಹೇರುವುದು ಖಂಡನೀಯ. ರಾಷ್ಟ್ರೀಯ ಪಕ್ಷಗಳು ಇಂತಹ ದೌರ್ಜನ್ಯವನ್ನು ಎಸಗುತ್ತವೆ. ಆದರೆ ಪ್ರಾದೇಶಿಕ ಪಕ್ಷಗಳು ಸ್ಥಳೀಯ ಭಾಷೆಗೆ ಒತ್ತು ನೀಡಿ ಉಳಿಸಲು ಶ್ರಮಿಸುತ್ತವೆ. ಈ ನಿಟ್ಟಿನಲ್ಲಿ ಜೆಡಿಎಸ್ ಹಿಂದಿ ಹೇರಿಕೆಯನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ತಿಳಿಸಿದರು.
ಎಲ್ಲ ಭಾಷೆಗಳನ್ನು ಗೌರವಿಸಬೇಕು. ಆದರೆ, ಯಾವುದೇ ಒಂದು ಭಾಷೆಯ ಹೇರಿಕೆ ಸಲ್ಲದು. ಹಿಂದಿ, ಇಂಗ್ಲಿಷ್ ಸೇರಿದಂತೆ ಎಲ್ಲ ಭಾಷೆ
ಜ್ಞಾನ ಇರಬೇಕು. ಆದರೆ ಕಲಿಯಲೇ ಬೇಕು ಎಂಬ ಒತ್ತಡ ಸರಿಯಲ್ಲ. ಮಾತೃ ಭಾಷೆ, ಪ್ರಾದೇಶಿಕ ಭಾಷೆಗಳ ಬದಲಿಗೆ ಇಂತಹದ್ದೇ ಭಾಷೆ ಬಳಸಬೇಕು ಎನ್ನುವುದು ನಿರಂಕುಶವಾದಿಗಳು ಜನರ ಮೇಲೆ ಎಸಗುವ ದೌರ್ಜನ್ಯ. ಇಂತಹ ಒತ್ತಡಗಳಿಗೆ ಕನ್ನಡಿಗರು ಮಣಿಯುವುದಿಲ್ಲ ಎಂದು ಪ್ರತಿಭಟನನಿರತರು ಎಚ್ಚರಿಸಿದರು.
ಗೌರವಾಧ್ಯಕ್ಷ ರಾಜಶೇಖರ್, ಎನ್ಎ ಈರಣ್ಣ, ಪುರಸಭೆ ಮಾಜಿ ಸದಸ್ಯ ಜಿ.ಎ. ವೆಂಕಟೇಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯೂನುಸ್, ಗಂಗಾಧರ ನಾಯ್ಡು, ಚಾಂದ್, ಬಾಬಾ, ಮುಖಂಡರಾದ ಕೆ.ಟಿ. ನಾಗರಾಜ್, ಕಾವಲಗೆರೆ ರಾಮಾಂಜಿ, ಮಣಿ, ಲೋಕೇಶ್, ಶಿವಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.