ತುಮಕೂರು: ಸಹಜ ಬೇಸಾಯ ಕೈಗೊಳ್ಳುವ ಮುನ್ನ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಬೇಕು ಎಂದು ಕೃಷಿ ವಿಜ್ಞಾನಿ ಮಂಜುನಾಥ್ ಹೇಳಿದರು.
ತಾಲ್ಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಹತ್ತಿರ ಸಹಜ ಕೃಷಿಕ ರವೀಶ್ ಅವರ ತೋಟದಲ್ಲಿ ಆಯೋಜಿಸಿದ್ಧ ಸಹಜ ಬೇಸಾಯ ಕಾರ್ಯಾಗಾರದಲ್ಲಿ ಮಾತನಾಡಿದರು.
ವಲಯವಾರು ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಬಹು ಬೆಳೆಗಳನ್ನು ಬೆಳೆಯುವ ಮೂಲಕ ಒಂದೇ ತರಹದ ಬೆಳೆಗಳನ್ನು ಬೆಳೆದು ಬೆಲೆಗೆ ನಡೆಯುವ ಪೈಪೋಟಿಯನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಹಿರಿಯರಲ್ಲಿ ಅಪಾರ ಕೃಷಿ ಅನುಭವ ಇದೆ. ಅವರನ್ನು ಮಾತನಾಡಿಸಿ ಅವರ ಅನುಭವಗಳನ್ನು ನಾವು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಪರಿಸರ ಹೋರಾಟಗಾರ ಸಿ.ಯತಿರಾಜು ಮಾತನಾಡಿ,‘ ಹವಾಮಾನ ವೈಫರಿತ್ಯ ಜಗತ್ತಿನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ಅರ್ಥ ಮಾಡಿಕೊಂಡು ಸಹಜ ಬೇಸಾಯ ಮಾಡಬೇಕು ಎಂದು ಹೇಳಿದರು.
ಸಕಲ ಜೀವಿಗಳನ್ನು ಪ್ರೀತಿಸುವ ನಿಸರ್ಗವನ್ನು ಗೌರವಿಸುವ ಹಾಗೂ ಆರಾಧಿಸುವ ಕಡೆಗೆ ನಮ್ಮೆಲ್ಲರ ನಡೆ ಇರಬೇಕು. ರಾಸಾಯನಿಕ ಮುಕ್ತ ಆಹಾರ ಸೇವನೆ ಎಲ್ಲರ ಗುರಿಯಾಗಬೇಕು ಎಂದು ತಿಳಿಸಿದರು.
ಮೆಕ್ಸಿಕೋದ ಇಕೋಸರ್ ವಿವಿಯ ಸಂಶೋಧನಾ ವಿದ್ಯಾರ್ಥಿ ಡೇವಿಡ್ ಬರ್ನಲ್, ಬೆಂಗಳೂರಿನ ಐಸೆಕ್ನ ಸಂಶೋಧನಾರ್ಥಿ ಪುನಿತ್, ರಾಜಸ್ತಾನ ಕೃಷಿಕ ಅಮಿತ್, ಸಹಜ ಬೇಸಾಯಗಾರ ರವೀಶ್, ಎನ್.ಇಂದಿರಮ್ಮ, ಆರ್.ಕೆ.ರಾಮಕೃಷ್ಣಪ್ಪ, ಕಾರ್ಯಕರ್ತ ಕೆ.ಪಿ.ಮಧುಸೂದನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.