ತುಮಕೂರು: ತುಮಕೂರು ಜಿಲ್ಲೆ ರಂಗಭೂಮಿಯ ತವರೂರು. ಇಲ್ಲಿನ ಕಲಾವಿದರಿಗೆರಂಗ ಕಲೆಗಳಲ್ಲಿ ಅತೀವ ಆಸಕ್ತಿಯಿದೆ. ಅದರಲ್ಲೂ ರಂಗಗೀತೆಗಳ ಗಾಯನವೆಂಬುದು ರಂಗಹಬ್ಬವಿದ್ದಂತೆ. ದಿನವಿಡಿ ಹಾಡುವ ರಂಗಕಲಾವಿದರು ಇರುವುದು ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದು ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಶಿವಮಹದೇವಯ್ಯ ಅಭಿಪ್ರಾಯಪಟ್ಟರು.
ಮೈಸೂರಿನ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಸಹಯೋಗದಲ್ಲಿ ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಂಗಗೀತೆಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಹಿರಿಯ ಕಲಾವಿದ ಯೋಗಾನಂದ್, ‘ಬಿ.ವಿ.ಕಾರಂತರು ನಾಟಕ ಕ್ಷೇತ್ರಕ್ಕೆ ಅದರಲ್ಲೂ ಸಾಮಾಜಿಕ ನಾಟಕ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಿಂದಿನ ದಿನಗಳಲ್ಲಿ ನಗರದ ಎಚ್ಎಂಟಿ ಕಲಾವಿದರು ತಿಂಗಳುಗಟ್ಟಲೇ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು’ ಎಂದು ಸ್ಮರಿಸಿದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ‘ಆಧುನಿಕ ಕಾಲಘಟ್ಟದಲ್ಲಿಯೂರಂಗ ನಾಟಕ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದು ಹೆಮ್ಮೆಯ ವಿಚಾರವಾಗಿದೆ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇಲ್ವಿಚಾರಕ ಡಿ.ವಿ.ಸುರೇಶ್ ಕುಮಾರ್, ರಂಗಭೂಮಿ ಕಲಾವಿದ
ರಾದ ಎಚ್.ಆರ್.ರಂಗಪ್ಪ, ಎಚ್.ಬಿ.ಪುಟ್ಟಬೋರಯ್ಯ, ಪುಟ್ಟರುದ್ರಯ್ಯ, ಎಸ್.ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಎನ್.ರಮೇಶ್, ರಾಜೇಶ್, ಸಿದ್ದಪ್ಪ ಭಾಗವಹಿಸಿದ್ದರು.
ಶ್ರೀಕಂಠರಾಧ್ಯ, ಮಂಜುನಾಥ್, ಉದಯರವಿ ಡ್ರಾಮ ಸೀನ್ಸ್ ಮಾಲೀಕರಾದ ಉದಯ್ ಕುಮಾರ್, ಜಗದೀಶ್, ಗೂಳೆಹರಿವೆ ರಂಗಶ್ಯಾಮಣ್ಣ, ಮರಳೂರು ರಾಮಣ್ಣ, ಜಯರಾಮ್, ಕಾಳಿಂಗರಾವ್, ರೈಲ್ವೆ ಚಂದ್ರಣ್ಣ ಮೊದಲಾದವರು ರಂಗಗೀತೆಗಳ ಗಾಯನ ನಡೆಸಿಕೊಟ್ಟರು. ರಂಗ ನಿರ್ದೇಶಕ ತಿಮ್ಮಗಿರಿಗೌಡ ಹಾರ್ಮೊನಿಯಂ, ಶೆಟ್ಟಳ್ಳಪ್ಪ ತಬಲ, ಪ್ರವೀಣ್ ಕೀ ಬೋರ್ಡ್ ಸಾಥ್ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.