ತುಮಕೂರು: ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುವಾಗುವಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಳ ನಿಗದಿಗೊಳಿಸಲಾಗಿದ್ದು, ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.
ಸೆ. 10ರಂದು ಹಬ್ಬದ ದಿನ ಸಂಜೆ 4ರಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಪುಟ್ಟ ಗಣೇಶ ಮೂರ್ತಿಗಳ ವಿಸರ್ಜನೆಗೆ ನೀರಿನ ಟ್ಯಾಂಕರ್ಗಳನ್ನು ಹೊಂದಿರುವ ವಾಹನ ವ್ಯವಸ್ಥೆ ಮಾಡಲಾಗಿದೆ. ನಗರದ ಬಟವಾಡಿ ಆಂಜನೇಯ ದೇವಸ್ಥಾನದ ಬಳಿ, ಶೆಟ್ಟಿಹಳ್ಳಿ ರಸ್ತೆಯ ರಾಘವೇಂದ್ರಸ್ವಾಮಿ ಮಠದ ಬಳಿ, ಮಹಾನಗರ ಪಾಲಿಕೆ ಕಚೇರಿ ಆವರಣ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ, ಅಗ್ರಹಾರದ ಶಿಶುವಿಹಾರದ ಬಳಿ (7ನೇ ವಾರ್ಡ್), ಕ್ಯಾತ್ಸಂದ್ರ ಬಸ್ ನಿಲ್ದಾಣದ ಬಳಿ, ಶಿರಾಗೇಟ್ ಕನಕವೃತ್ತದ ಹತ್ತಿರ, ಕೊಲ್ಲಾಪುರದಮ್ಮ ದೇವಸ್ಥಾನದ ಹತ್ತಿರ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದು.
ಮಹಾನಗರ ಪಾಲಿಕೆ ವ್ಯಾಪ್ತಿಯ 30ನೇ ವಾರ್ಡ್ ಟಿ.ಪಿ.ಕೈಲಾಸಂ ಮುಖ್ಯ ರಸ್ತೆಯಲ್ಲಿರುವ ಗಾರೆ ನರಸಯ್ಯನ ಕಟ್ಟೆಯಲ್ಲಿ ದೊಡ್ಡ ಗಣೇಶ ಮೂರ್ತಿಗಳ ವಿಸರ್ಜನೆಗೆ (ಕ್ರೇನ್ ವ್ಯವಸ್ಥೆ) ಹಾಗೂ ವಿದ್ಯಾನಗರದಲ್ಲಿರುವ ಪಂಪ್ಹೌಸ್ನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ನಿರ್ಮಿತ ಹಾಗೂ ಬಣ್ಣ ಲೇಪಿತ ವಿಗ್ರಹಗಳ ಮಾರಾಟ, ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಮಾರಾಟಗಾರರು ಪಿಒಪಿ ನಿರ್ಮಿತ, ಬಣ್ಣ ಲೇಪಿತ ವಿಗ್ರಹಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಪಾಲಿಕೆಯಿಂದ ದಂಡ ವಿಧಿಸಿ ವಶಕ್ಕೆ ಪಡೆಯಲಾಗುವುದು ಎಂದು ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.