ADVERTISEMENT

ಭಟ್ಟರ ಕೈ ಹಿಡಿದ ತಿನಿಸಿನ ಗೃಹೋದ್ಯಮ

ಯಲ್ಲಾಪುರದಲ್ಲಿ 25 ವರ್ಷಗಳಿಂದ ಮನೆಮಾತಾಗಿರುವ ಮಾರುತಿ ಹೋಂ ಪ್ರೊಡಕ್ಟ್ಸ್

ನಾಗರಾಜ ಮದ್ಗುಣಿ
Published 17 ಏಪ್ರಿಲ್ 2019, 19:45 IST
Last Updated 17 ಏಪ್ರಿಲ್ 2019, 19:45 IST
ರುಚಿ ರುಚಿಯಾದ ಚಕ್ಕಲಿ ತಯಾರಿಸುತ್ತಿರುವ ಯಲ್ಲಾಪುರದ ಮಾರುತಿ ಹೋಂ ಪ್ರಾಡಕ್ಟ್ಸ್‌ನ ಎನ್.ವಿ.ಭಟ್ಟ ಹಾಗೂ ಪತ್ನಿ ಮಾದೇವಿ
ರುಚಿ ರುಚಿಯಾದ ಚಕ್ಕಲಿ ತಯಾರಿಸುತ್ತಿರುವ ಯಲ್ಲಾಪುರದ ಮಾರುತಿ ಹೋಂ ಪ್ರಾಡಕ್ಟ್ಸ್‌ನ ಎನ್.ವಿ.ಭಟ್ಟ ಹಾಗೂ ಪತ್ನಿ ಮಾದೇವಿ   

ಯಲ್ಲಾಪುರ:ಪಟ್ಟಣದತಟಗಾರ್ ರಸ್ತೆಯಲ್ಲಿರುವ ಗೃಹೋದ್ಯಮ ಮಾರುತಿ ಹೋಂ ಪ್ರಾಡಕ್ಟ್ಸ್ 25 ವರ್ಷಗಳಿಂದ ಜನರಿಗೆ ಶಂಕರ ಪೋಳಿ ಹಾಗೂ ಚಕ್ಕುಲಿಯ ರುಚಿ ನೀಡುತ್ತಿದೆ.ನರಸಿಂಹ ವೆಂಕಟ್ರಮಣ ಭಟ್ಟ (ಎನ್.ವಿ.ಭಟ್ಟ) ಈ ಉದ್ಯಮವನ್ನು ಪತ್ನಿಯ ಬಂಗಾರದಕಿವಿಯೋಲೆಯನ್ನು ಅಡವಿಟ್ಟು ಆರಂಭಿಸಿದರು. ಅವರಪರಿಶ್ರಮದ ಫಲವಾಗಿಉದ್ಯಮ ಕೈ ಹಿಡಿದಿದೆ.

ಎನ್.ವಿ.ಭಟ್ಟ ಅವರು ಜೀವನೋಪಾಯಕ್ಕಾಗಿ ಒಂದು ಚಿಕ್ಕ ಅಂಗಡಿ ಆರಂಭಿಸಿದ್ದರು. ಆದರೆ, ಅದು ಕೈ ಹಿಡಿಯಲಿಲ್ಲ. ಮೈ ತುಂಬ ಸಾಲವಾಗಿ ತಂದೆ, ತಾಯಿ, ಮಡದಿ, ಮಕ್ಕಳನ್ನು ಸಾಕುವುದು ಹೇಗೆ ಎಂಬ ಚಿಂತೆ ಕಾಡತೊಡಗಿತ್ತು. ಆಗ ಅವರಿಗೆ ತಂದೆ ವೆಂಕಟ್ರಮಣ ಭಟ್ಟ ನೆರವಾದರು.ಅವರು ಈ ಹಿಂದೆ ಉಡುಪಿ ಹೋಟೆಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು. ಅಲ್ಲಿಕಲಿತಿದ್ದ ಶಂಕರ ಪೋಳಿ ಹಾಗೂ ಚಕ್ಕುಲಿ ಮಾಡುವ ವಿಧಾನವನ್ನು ಮಗನಿಗೆ ಹೇಳಿಕೊಟ್ಟರು.

ಎನ್.ವಿ.ಭಟ್ಟರ ಕೈಯಲ್ಲಿ ಬಿಡಿಗಾಸೂ ಇಲ್ಲದ ಕಾರಣ ಪತ್ನಿ ಮಾದೇವಿ ತಮ್ಮ ಕಿವಿಯೋಲೆಯನ್ನು ಅಡವಿಡಲು ನೀಡಿದರು. ಒಲ್ಲದ ಮನಸ್ಸಿನಿಂದಲೇ ಭಟ್ಟರು ₹ 960ಕ್ಕೆ ಅಡವಿಟ್ಟು ಬೇಕಾದ ಸಾಮಗ್ರಿ ತಂದು ಉದ್ಯೋಗ ಆರಂಭಿಸಿದರು. ಶಂಕರ ಪೋಳಿ, ರುಚಿಯಾದ ಚಕ್ಕುಲಿ ತಯಾರಿಸಿ ₹ 2, ₹ 5 ಪ್ಯಾಕೆಟ್‌ಗಳನ್ನು ಮಾಡಿ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟರು. ಇದಕ್ಕೆ ಬೇಡಿಕೆ ಕುದುರತೊಡಗಿತು.

ADVERTISEMENT

ಅಂದು ಮೂರು ಕೆ.ಜಿ ಹಿಟ್ಟಿನಿಂದ ಆರಂಭವಾದ ಉದ್ಯೋಗ, ಇಂದು ದಿನಕ್ಕೆ 30 ಕೆ.ಜಿ ಹಿಟ್ಟಿನ ತಿಂಡಿ ತಯಾರಿಸುವ ಉದ್ಯಮವಾಗಿ ಬೆಳೆದಿದೆ. ಗಂಡ, ಹೆಂಡತಿಯ ಜೊತೆ ಮೂವರು ಕೆಲಸಗಾರರು ಹಾಗೂ ಕಾಲೇಜಿಗೆ ಹೋಗುವ ಮಗಳು ರಾಜೇಶ್ವರಿ, ಪೌರೋಹಿತ್ಯಕ್ಕೆ ಹೋಗುವ ಮಗ ರವಿ ಕೈಜೋಡಿಸುತ್ತಿದ್ದಾರೆ.

ಭಟ್ಟರು ಕಾಲಕ್ರಮೇಣ ಘಾಟಿ, ಮಸಾಲಾ ಶಂಕರ ಪೋಳಿ, ಅವಲಕ್ಕಿ, ಚುಡುವಾ, ಮೆಕ್ಕೆಜೋಳದ ಚುಡುವಾ, ಸೇವು, ಬಟಾಟೆ ಚಿಪ್ಸ್, ಮಸಲಾ ಕಾಬೂಲ್ ಕಡ್ಲೆ, ಮಸಾಲಾ ಶೇಂಗಾ, ಹಾಗೂ ಜಿಲೇಬಿ, ಹಾಗೂ ಬುಂದಿ ಲಾಡುಗಳನ್ನು ತಯಾರಿಸಿ ಮಾರುತ್ತಿದ್ದಾರೆ. ಮಾರಾಟಕ್ಕಾಗಿ ತಮ್ಮ ಉದ್ಯಮ ಇರುವಲ್ಲಿಯೇ ಅಂಗಡಿ ಆರಂಭಿಸಿದ್ದಾರೆ.

‘ಹೆಚ್ಚೆಚ್ಚು ತಿಂಡಿಗಳನ್ನು ತಯಾರಿಸಿ ಗುಣಮಟ್ಟ ಹಾಳು ಮಾಡಿಕೊಳ್ಳಲುಮನಸ್ಸಿಲ್ಲ. ಹಾಗೇ ಹೆಚ್ಚು ವ್ಯಾಪಾರ ಮಾಡಿ ದಿಢೀರ್ ಶ್ರೀಮಂತನಾಗುವ ಹಂಬಲವೂ ಇಲ್ಲ. ನಾನು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ಎಂದು ಹೇಳುತ್ತಾರೆ.

ದೃಷ್ಟಿದೋಷವುಳ್ಳ ಭಟ್ಟರು ಸರ್ಕಾರದಿಂದ ಅಂಗವಿಕಲರ ಸೌಲಭ್ಯಗಳನ್ನು ಪಡೆದುಕೊಂಡಿಲ್ಲ.ಸಾಂಸ್ಕೃತಿಕ ಸಮಾರಂಭಗಳಿಗೆ ಧನ ಸಹಾಯ ಮಾಡುತ್ತಾರೆ. ಇವರ ಬಳಿ ಉದ್ಯೋಗ ಕಲಿತ ಐದಾರು ಜನರು ಇದೇ ಉದ್ಯೋಗ ಮಾಡಿಕೊಂಡಿದ್ದಾರೆ.

ಯಂತ್ರಗಳ ಬಳಕೆ:ಉದ್ಯಮಕ್ಕೆ ಬೇಕಾದ ಉಪಕರಣಗಳನ್ನುತಮಗೆಬೇಕಾದ ಹಾಗೆ ಹೇಳಿ ತಯಾರಿಸಿಕೊಂಡಿದ್ದಾರೆ. ಮೊದಲು ಕಟ್ಟಿಗೆ ಒಲೆಯಲ್ಲಿ ತಿಂಡಿಗಳನ್ನು ಸಿದ್ಧಪಡಿಸುತ್ತಿದ್ದವರು ಬೆಂಕಿಯ ಉಷ್ಣತೆಯ ಸ್ಥಿರತೆಯ ಕಾರಣದಿಂದ ಡೀಸೆಲ್ಒಲೆ ಬಳಕೆ ಮಾಡುತ್ತಿದ್ದಾರೆ. ಕಾವಿಗೆ ಆರಿ ಹೋಗುವ ಎಣ್ಣೆಯ ಪ್ರಮಾಣ ಮತ್ತೆ ಭರ್ತಿಯಾಗುವಂತೆ ಪೈಪ್ ಮೂಲಕ ಹನಿ ಹನಿಯಾಗಿ ಮತ್ತೆ ಕಡಾಯಿ ಸೇರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹಳೆಯ ಗ್ರೈಂಡರ್ ಒಂದನ್ನು ಹಿಟ್ಟು ಗಾಳಿಸುವ ಯಂತ್ರವಾಗಿ ಪರಿವರ್ತಿಸಿಕೊಂಡಿದ್ದಾರೆ. ಹಿಟ್ಟು ಮಿಶ್ರಣ ಮಾಡಲು,ಶಂಕರ ಪೋಳೆ ಲಟ್ಟಿಸಲು ಯಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ. ಒಂದು ಹಂತದ ಬಳಿಕ ಕೈಯಲ್ಲೇ ತೆಳ್ಳಗೆ ಒರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.