ADVERTISEMENT

ಮೇಜರ್ ರಾಣೆ ಕೊಡುಗೆ ಸದಾ ಸ್ಮರಣೀಯ: ಮಹೇಶ ಸಿಂಗ್

ವಿಜಯದ ಸುವರ್ಣ ವರ್ಷ ಜ್ಯೋತಿ: ನೌಕಾದಳದ ಅಧಿಕಾರಿಗಳಿಂದ ಗೌರವ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 13:38 IST
Last Updated 22 ಸೆಪ್ಟೆಂಬರ್ 2021, 13:38 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ಮೇಜರ್ ರಾಮ ರಾಘೋಬ ರಾಣೆ ಅವರ ಪ್ರತಿಮೆಗೆ ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಬುಧವಾರ ಗೌರವ ಸಲ್ಲಿಸಿದರು
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ಮೇಜರ್ ರಾಮ ರಾಘೋಬ ರಾಣೆ ಅವರ ಪ್ರತಿಮೆಗೆ ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಬುಧವಾರ ಗೌರವ ಸಲ್ಲಿಸಿದರು   

ಕಾರವಾರ: ‘ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ರಾಮ ರಾಘೋಬ ರಾಣೆ ಅವರು ಕಾರವಾರದವರು ಎಂಬುದೇ ಹೆಮ್ಮೆಯ ಸಂಗತಿ. 1948ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಅವರ ಧೈರ್ಯ ಹಾಗೂ ಕೊಡುಗೆ ಅಪಾರ’ ಎಂದು ಭಾರತೀಯ ನೌಕಾದಳದ ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಬಣ್ಣಿಸಿದರು.

‘ಸ್ವರ್ಣಿಂ ವಿಜಯ್ ವರ್ಷ್’ (ವಿಜಯದ ಸುವರ್ಣ ವರ್ಷ) ಜ್ಯೋತಿಯನ್ನು ಬುಧವಾರ, ನಗರದ ಐ.ಎನ್.ಎಸ್ ಚಾಪೆಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಮೇಜರ್ ರಾಮ ರಾಘೋಬ ರಾಣೆ ಸ್ಮಾರಕದ ಬಳಿ ಬರಮಾಡಿಕೊಂಡು ಅವರು ಮಾತನಾಡಿದರು.

ಇದಕ್ಕೂ ಮೊದಲು ಸ್ಮಾರಕದ ಬಳಿ ಜ್ಯೋತಿಯನ್ನು ನಿಲ್ಲಿಸಿ ಸ್ಮಾರಕಕ್ಕೆ ಹೂವಿನ ಮಾಲೆ ಸಲ್ಲಿಸಿ ಗೌರವಿಸಿದರು. 1971ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳ ವಿಜಯಕ್ಕೆ 50ನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ವಿಜಯ ಜ್ಯೋತಿಯು ಸಂಚರಿಸುತ್ತಿದೆ.

ADVERTISEMENT

ರಾಮ ರಾಘೋಬ ರಾಣೆ ಅವರ ಪತ್ನಿ ರಾಜೇಶ್ವರಿ ರಾಣೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅವರಿಗೆ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರು, ಯುದ್ಧ ವಿಮಾನ ವಾಹಕ ನೌಕೆ ಐ.ಎನ್.ಎಸ್ ವಿಕ್ರಮಾದಿತ್ಯದ ಚಿತ್ರವಿರುವ ಸ್ಮರಣಿಕೆಯನ್ನು ನೀಡಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.