ADVERTISEMENT

ದೇಶದಲ್ಲಿ ಅವಶ್ಯಕ ಪ್ರಮಾಣಕ್ಕಿಂತ ಅಧಿಕ ಆಹಾರೋತ್ಪಾದನೆ ಆಗುತ್ತಿದೆ: ಶೋಭಾ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 5:26 IST
Last Updated 18 ಸೆಪ್ಟೆಂಬರ್ 2021, 5:26 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಅಂಕೋಲಾ: ‘ಕೋವಿಡ್ ಸಂದರ್ಭದಲ್ಲಿಯೂ ಆಹಾರ ಉತ್ಪಾದನೆಯಲ್ಲಿ ದೇಶ ಗಮನಾರ್ಹ ಸಾಧನೆ ಮಾಡಿದೆ. ಕಳೆದ ವರ್ಷ ದೇಶದಲ್ಲಿ 305 ಮಿಲಿಯನ್ ಟನ್ ಆಹಾರ ಉತ್ಪಾದನೆ ಮತ್ತು 326 ಮಿಲಿಯನ್ ಟನ್ ತರಕಾರಿ ಉತ್ಪಾದನೆ ಮಾಡಿದ್ದು ದಾಖಲೆಯಾಗಿದೆ’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಹೊಸಗದ್ದೆಯ ಬಿ.ಜೆ.ಪಿ ಬೂತ್ ಘಟಕದ ಅಧ್ಯಕ್ಷ ಸೋಮೇಶ್ವರ ಗೌಡ ಅವರ ಮನೆಯಲ್ಲಿ ನಾಮಫಲಕ ಅಂಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ಅವಶ್ಯಕ ಪ್ರಮಾಣಕ್ಕಿಂತ ಅಧಿಕ ಆಹಾರೋತ್ಪಾದನೆ ಆಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಹೆಚ್ಚಿಸಲು ರೈತರಿಗೆ ತರಬೇತಿ ಮತ್ತು ಮಾಹಿತಿ ಅವಶ್ಯಕತೆ ಇದೆ. ಕೃಷಿ ವಲಯದಲ್ಲಿ ಇಂದಿಗೂ ಹಲವು ಸಮಸ್ಯೆಗಳಿವೆ. ರೈತರ ಆದಾಯ ದ್ವಿಗುಣಗೊಳಿಸಲು ಅಗತ್ಯ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಆಹಾರ ಸಂಸ್ಕರಣೆ ಮತ್ತು ಸಂಗ್ರಹಣೆ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಮಾರಣಾಂತಿಕ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹಿಂದಿನ ಸರ್ಕಾರ ಹೊರ ರಾಷ್ಟ್ರಗಳಲ್ಲಿ ತಯಾರಿಸಿದ ಲಸಿಕೆಯನ್ನು 3-4 ವರ್ಷಗಳ ನಂತರ ದೇಶದ ಜನರಿಗೆ ವಿತರಣೆ ಮಾಡುತ್ತಿತ್ತು. ಮೋದಿ ಸರ್ಕಾರ ಕೋವಿಡ್ ಕಾಣಿಸಿಕೊಂಡ 11 ತಿಂಗಳಲ್ಲಿ ಸ್ವದೇಶಿ ಲಸಿಕೆ ಸಿದ್ಧಪಡಿಸಿ ಜನರಿಗೆ ವಿತರಿಸಿದೆ’ ಎಂದು ಸಚಿವರು ಹೇಳಿದರು.

ADVERTISEMENT

ರಿಕ್ಷಾ ಚಲಾಯಿಸಿ ಪರಿಶ್ರಮದಿಂದ ಪ್ರಾಮಾಣಿಕವಾಗಿ ಜೀವನ ನಡೆಸುತ್ತಿರುವ ಕಾರ್ಯಕರ್ತರ ಮನೆಯಲ್ಲಿ ನಾಮ ಫಲಕ ಅಂಟಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೆಮ್ಮೆ ತಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.