ಮುಂಡಗೋಡ: ‘ಚುನಾವಣೆ ಗೆಲ್ಲಲು ಕಾಂಗ್ರೆಸ್ ಜನರಿಗೆ ಗ್ಯಾರಂಟಿ ಕಾರ್ಡ್ ಕೊಡುವ ನಾಟಕ ಮಾಡುತ್ತಿದೆ. ಆದರೆ ಆ ಪಕ್ಷದ ನಾಯಕ ಸಿದ್ಧರಾಮಯ್ಯ ಗೆಲ್ಲುವುದೇ ಗ್ಯಾರಂಟಿ ಇಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಕರಗಿನಕೊಪ್ಪದ ಲೊಯೋಲ ಶಾಲೆಯ ಎದುರು ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆ. ರಾಜ್ಯದಲ್ಲಿ ಅದು ಐಸಿಯುನಲ್ಲಿದೆ. ರಾಹುಲ್ ಗಾಂಧಿ ಕಾಲಿಟ್ಟ ಕಡೆಯಲ್ಲೆಲ್ಲ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದೆ. ಪೂರ್ವ ರಾಜ್ಯಗಳ ಚುನಾವಣೆ ಫಲಿತಾಂಶ ಅದಕ್ಕೆ ಜ್ವಲಂತ ಉದಾಹರಣೆ’ ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ‘25 ವರ್ಷ ಕ್ಷೇತ್ರವನ್ನು ಆಳಿದ ಮಹಾನ್ ನಾಯಕನಿಗೆ, ಒಂದೇ ಒಂದು ಕೈಗಾರಿಕೆಯನ್ನು ತಾಲ್ಲೂಕಿಗೆ ತರಲು ಆಗಲಿಲ್ಲ. ಅನ್ನದಾತನಿಗೆ ನೀರಿನ ವ್ಯವಸ್ಥೆ ಮಾಡಲು ಆಗಲಿಲ್ಲ. ಆದರೆ, ಚುನಾವಣೆ ಬಂದಾಗ ರೈತರು, ಬಡವರು ಎಂದು ನಾಟಕ ಮಾಡುತ್ತಾರೆ’ ಎಂದು ಶಾಸಕ ಆರ್.ವಿ.ದೇಶಪಾಂಡೆ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಪತ್ತಿಗೆ ಸವಾಲ್ ಚಿತ್ರದ, ‘ಯಾರೇ ಕೂಗಾಡಲಿ’ ಎಂದು ಹಾಡು ಹೇಳುತ್ತ, ಮುಂಡಗೋಡ ತಾಲ್ಲೂಕಿನ ಜನರ ಆಶಿರ್ವಾದ ಇರುವರೆಗೂ, ನನ್ನ ನೆಮ್ಮದಿಗೆ ಭಂಗವಿಲ್ಲ..ಎಂದು ಹಾಡಿದಾಗ ಕಾರ್ಯಕರ್ತರ ಕೇಕೆ ಮುಗಿಲುಮುಟ್ಟಿತ್ತು.
ಸಮಾವೇಶಕ್ಕೆ ಮುನ್ನ ಇಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಕರಗಿನಕೊಪ್ಪದವರೆಗೆ ಕಾರ್ಯಕರ್ತರು ಬೈಕ್ ಮೆರವಣಿಗೆ ನಡೆಸಿದರು.
ಯುವ ಮುಖಂಡ ವಿವೇಕ ಹೆಬ್ಬಾರ್, ರವಿ ಹೆಗಡೆ ಹೂವಿನಮನೆ, ರವಿಗೌಡ ಪಾಟೀಲ, ಎಲ್.ಟಿ.ಪಾಟೀಲ, ಗುಡ್ಡಪ್ಪ ಕಾತೂರ, ಪ್ರಮೋದ ಹೆಗಡೆ, ಕೆ.ಜಿ. ನಾಯ್ಕ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.