ADVERTISEMENT

24ರಂದು ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ

ಸಚಿವ ಆನಂದ್ ಸಿಂಗ್ ವೈಯಕ್ತಿಕ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 9:58 IST
Last Updated 20 ಮಾರ್ಚ್ 2023, 9:58 IST
ವಿಜಯನಗರ ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಗೌರವ ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ಅಧ್ಯಕ್ಷ ಕೆ.ಪಿ. ಉಮಾಪತಿ, ಪ್ರಧಾನ ಕಾರ್ಯದರ್ಶಿ ಎಂ. ವೆಂಕಟೇಶ್ವರಲು ಹಾಗೂ ಇತರರು ಅಂಬೇಡ್ಕರ್‌ ಪ್ರತಿಮೆ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಸೋಮವಾರ ಹೊಸಪೇಟೆಯಲ್ಲಿ ಬಿಡುಗಡೆಗೊಳಿಸಿದರು
ವಿಜಯನಗರ ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಗೌರವ ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ಅಧ್ಯಕ್ಷ ಕೆ.ಪಿ. ಉಮಾಪತಿ, ಪ್ರಧಾನ ಕಾರ್ಯದರ್ಶಿ ಎಂ. ವೆಂಕಟೇಶ್ವರಲು ಹಾಗೂ ಇತರರು ಅಂಬೇಡ್ಕರ್‌ ಪ್ರತಿಮೆ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಸೋಮವಾರ ಹೊಸಪೇಟೆಯಲ್ಲಿ ಬಿಡುಗಡೆಗೊಳಿಸಿದರು   

ಹೊಸಪೇಟೆ (ವಿಜಯನಗರ): 'ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ವೈಯಕ್ತಿಕ ದೇಣಿಗೆ ₹1 ಕೋಟಿ ವೆಚ್ಚದಲ್ಲಿ ನಗರದ ಜೈಭೀಮ್ ವೃತ್ತದಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ನೂತನ ಪ್ರತಿಮೆ ಹಾಗೂ ವೃತ್ತದ ಉದ್ಘಾಟನಾ ಸಮಾರಂಭ ಮಾ. 24ರಂದು ಹಮ್ಮಿಕೊಳ್ಳಲಾಗಿದೆ’ ಎಂದು ವಿಜಯನಗರ ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಗೌರವ ಅಧ್ಯಕ್ಷ ಎಂ.ಸಿ. ವೀರಸ್ವಾಮಿ ತಿಳಿಸಿದರು.

ಸಂಸತ್ತಿನ ಮಾದರಿಯಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಅದರ ಮೇಲೆ 12.6 ಅಡಿ ಎತ್ತರದ ಕಂಚಿನ ಪ್ರತಿಮೆ‌ ನಿಲ್ಲಿಸಲಾಗಿದೆ. ಸಂಸತ್ತಿನ ಮಾದರಿಯಲ್ಲಿ ಕಟ್ಟಡ ನಿರ್ಮಿಸಿ ಪ್ರತಿಮೆ ಪ್ರತಿಷ್ಠಾಪಿಸಿರುವುದು ಇಡೀ ದೇಶದಲ್ಲಿ‌ ಎರಡು ಕಡೆಗಳಲ್ಲಿ ಮಾತ್ರ. ರಾಜ್ಯದಲ್ಲಿ ಪ್ರಥಮ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಮಾ. 24ರಂದು ಸಂಜೆ 6ಕ್ಕೆ ಸಚಿವ ಆನಂದ್ ಸಿಂಗ್ ಪ್ರತಿಮೆ ಅನಾವರಣಗೊಳಿಸುವರು. ಜಲಸಂಪನ್ಮೂಲ ಸಚಿವ ಗೋವಿಂದ ಎಂ‌. ಕಾರಜೋಳ ವೃತ್ತ ಉದ್ಘಾಟಿಸುವರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೋಡಿಹಳ್ಳಿ ದೇಶಿಕೇಂದ್ರ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಎಚ್.‌ಆಂಜನೇಯ, ಕನಕಗಿರಿ ಶಾಸಕ ಬಸವರಾಜ ದಡೇಸೂಗುರು, ನಗರಸಭೆ ಅಧ್ಯಕ್ಷೆ ಸುಂಕಮ್ಮ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮಕ್ಕೆ ಸರ್ವಧರ್ಮಗಳ ಮುಖಂಡರನ್ನು ಆಹ್ವಾನಿಸಲಾಗಿದೆ. ಆ ದಿನ ಇಡೀ ನಗರ ನೀಲಿಮಯವಾಗಲಿದೆ. ಅಂಬೇಡ್ಕರ್ ವೃತ್ತವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ಸುಮಾರು ಐದು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೂವಿನಹಡಗಲಿಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆ‌ ಬಂಧನದ ರೀತಿಯಲ್ಲಿದೆ.‌ ಅದನ್ನು ಸರಿಪಡಿಸುವ ಕೆಲಸ‌ ಸಮಾಜದಿಂದ ಮಾಡಲಾಗುವುದು ಎಂದು ಹೇಳಿದರು.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಆರು ಲಕ್ಷ ಮಾದಿಗರಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ತಲಾ 40ರಿಂದ 45 ಸಾವಿರ ಸಮಾಜದ ಮತದಾರರಿದ್ದಾರೆ. ಎರಡು ಎಸ್ಸಿ ಮೀಸಲು ಕ್ಷೇತ್ರಗಳಿದ್ದು, ಎಲ್ಲ ರಾಜಕೀಯ ಪಕ್ಷಗಳು‌ ಸಮಾಜದವರನ್ನು ಪರಿಗಣಿಸಬೇಕೆಂದು ಸಂಘದ ಅಧ್ಯಕ್ಷ ಕೆ.ಪಿ. ಉಮಾಪತಿ ಕೋರಿದರು.

ಮುಖಂಡರಾದ ಜಗನ್, ಬಿ. ಮಾರೆಣ್ಣ, ಸಣ್ಣ ವೀರಪ್ಪ, ಸೆಲ್ವಂ, ಶೇಷಾದ್ರಿ, ಕೆ. ಲಕ್ಷ್ಮಣ್, ನಿಂಬಗಲ್‌ ರಾಮಕೃಷ್ಣ, ಓಬಳಾಪತಿ, ಕೃಷ್ಣ, ಬಿ.ಇ.‌ಶೇಕ್ಷಾವಲಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.