ADVERTISEMENT

ಹೊಸಪೇಟೆ| ಕಸ ಸಾಗಣೆ ವಾಹನ ಚಾಲಕರಿಂದ ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 13:41 IST
Last Updated 19 ಮಾರ್ಚ್ 2023, 13:41 IST
ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದ (ಎಐಸಿಸಿಟಿಯು ಸಂಯೋಜಿತ) ಜಿಲ್ಲಾಧ್ಯಕ್ಷ ಗೋಪಾಲ್‌ ಅವರು ಮುಷ್ಕರದ ಪೋಸ್ಟರ್‌ ಭಾನುವಾರ ಹೊಸಪೇಟೆಯಲ್ಲಿ ಬಿಡುಗಡೆಗೊಳಿಸಿದರು
ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದ (ಎಐಸಿಸಿಟಿಯು ಸಂಯೋಜಿತ) ಜಿಲ್ಲಾಧ್ಯಕ್ಷ ಗೋಪಾಲ್‌ ಅವರು ಮುಷ್ಕರದ ಪೋಸ್ಟರ್‌ ಭಾನುವಾರ ಹೊಸಪೇಟೆಯಲ್ಲಿ ಬಿಡುಗಡೆಗೊಳಿಸಿದರು   

ಹೊಸಪೇಟೆ (ವಿಜಯನಗರ): ‘ಸೇವೆ ಕಾಯಂಗೊಳಿಸಲು ಆಗ್ರಹಿಸಿ ಸೋಮವಾರದಿಂದ (ಮಾ.20) ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದ (ಎಐಸಿಸಿಟಿಯು ಸಂಯೋಜಿತ) ಜಿಲ್ಲಾಧ್ಯಕ್ಷ ಗೋಪಾಲ್‌ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಸದ್ಯ 47 ಕಸ ಸಾಗಣೆ ವಾಹನಗಳಿದ್ದು, 67 ಜನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲರೂ ಕೆಲಸ ಬಹಿಷ್ಕರಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವರು. ನಮ್ಮನ್ನು ಬೆಂಬಲಿಸುವಂತೆ ನಗರಸಭೆಯ ಇತರೆ ಸಿಬ್ಬಂದಿಗೂ ಮನವಿ ಮಾಡಲಾಗಿದೆ. ಸೋಮವಾರ ನಗರಸಭೆ ಕಚೇರಿಯಿಂದ ಜಿಲ್ಲಾಧಿಕಾರಿ ವರೆಗೆ ರ್‍ಯಾಲಿ ನಡೆಸಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

ಎರಡು ವರ್ಷ ನಿರಂತರ ಕೆಲಸ ಮಾಡಿದವರನ್ನು ಕಾಯಂಗೊಳಿಸಲಾಗುವುದು ಎಂದು ಸರ್ಕಾರವೇ ತಿಳಿಸಿದೆ. ನಾವೆಲ್ಲರೂ ಆರು ವರ್ಷಗಳಿಂದ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದೇವೆ. ಹಲವು ಸಲ ಮನವಿ ಸಲ್ಲಿಸಿದರೂ ಸರ್ಕಾರ ಕಿವಿಗೊಟ್ಟಿಲ್ಲ. ವೇತನ ಸಹ ಸರಿಯಾಗಿ ಕೈಸೇರುತ್ತಿಲ್ಲ. ಯಾರಾದರೂ ಮನೆಯಲ್ಲಿ ಮೃತಪಟ್ಟರೆ ಅದಕ್ಕೆ ಹೋಗಲಾಗುತ್ತಿಲ್ಲ. ಅಷ್ಟು ಕೆಲಸದ ಒತ್ತಡ ಇದೆ. ಹೀಗಿದ್ದರೂ ಸರ್ಕಾರ ನಮ್ಮತ್ತ ನೋಡಿ ನಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂದರು.

ADVERTISEMENT

ಸಂಘದ ಉಪಾಧ್ಯಕ್ಷ ಎಚ್‌. ಗಂಗಾಧರ, ಕಾರ್ಯದರ್ಶಿ ಕೆ. ರಮೇಶ, ಪೆನ್ನಯ್ಯಾ, ಹೊನ್ನೂರು, ಶ್ರೀನಿವಾಸ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.