ತಿಕೋಟಾ: ಪಟ್ಟಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಕುರಿತು ‘ಪ್ರಜಾವಾಣಿ’ ಯ ಸೋಮವಾರದ ಸಂಚಿಕೆಯ ‘ನಮ್ಮ ಜನ ನಮ್ಮ ಧ್ವನಿ’ ವಿಭಾಗದಲ್ಲಿ ವಿಶೇಷ ವರದಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಶಾಸಕ ಎಂ.ಬಿ.ಪಾಟೀಲ ಅವರ ಸೂಚನೆ ಮೇರೆಗೆ ಆಪ್ತ ಸಹಾಯಕ ಸಂತೋಷ ಲೋಕುರೆ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಚ್.ಎ.ಡಾಲಾಯತ್ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು.
ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅಧಿಕಾರಿ ಡಾಲಾಯತ್ ಗೈರಾಣಿ, ಜನವಸತಿ ಪ್ರದೇಶಕ್ಕೆ ನೀರಿನ ಯೋಜನೆಗೆ ಮೀಸಲು ಇಡಲಾಗಿರುವ ₹ 67 ಲಕ್ಷ ಮೊತ್ತದ ಕಾಮಗಾರಿಗೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರೊಳಗಾಗಿ ವರ್ಕ್ ಆರ್ಡರ್ ನೀಡಲಾಗುವುದು ಎಂದು ಹೇಳಿದರು.
ಸದ್ಯ ಬಳಕೆಯಾಗದೇ ಇರುವ ಟ್ಯಾಂಕಿಗೆ ಬಹುಹಳ್ಳಿ ಕುಡಿಯುವ ನೀರಿನ ಮೂಲಕ ಪೈಪ್ ಜೋಡಣೆ ಮಾಡಿ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಅಂಬೇಡ್ಕರ್ ಕಾಲೊನಿಯಲ್ಲಿ ಹೊಸ ಕೊಳವೆಬಾವಿ ಕೊರೆಯಲಾಗುವುದು. ಮೊರಾರ್ಜಿ ಶಾಲೆ ಹತ್ತಿರ ₹ 1 ಲಕ್ಷ ವೆಚ್ಚದಲ್ಲಿ ಟಾಕಿ ನಿರ್ಮಿಸಲಾಗುವುದು, 9 ಮತ್ತು 10ನೇ ವಾರ್ಡಿನಲ್ಲಿ ಶೀಘ್ರವೇ ಕೊಳವೆ ಬಾವಿಗೆ ಮೊಟರ್ ಅಳವಡಿಕೆ ಮಾಡಲಾಗುವುದು ಎಂದರು.
ತಿಕೋಟಾವು ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿರುವುದರಿಂದ ಅನುದಾನದ ಕೊರತೆ ಇದೇ ಹಂತ ಹಂತವಾಗಿ ಪ್ರತಿ ವಾರ್ಡಿಗೂ ವರ್ಷಕ್ಕೆ ಒಂದರಂತೆ ಒಂದೊಂದು ವಾರ್ಡಿಗೂ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿಜುಗೌಡ ಪಾಟೀಲ್, ಬಸಯ್ಯ ವಿಭೂತಿಮಠ, ಆರ್.ಬಿ.ದೇಸಾಯಿ, ಹಾಜಿಲಾಲ ಕೋಟಲಗಿ, ಮಮ್ಮು ಹಂಜಗಿ ,ಸಂತೋಷ ಕೋಲಾರ, ಭೀಮು ನಾಟಿಕಾರ, ಭಾಗೀರಥಿ ತೇಲಿ, ಮಲ್ಲಿಕಾರ್ಜುನ ಹಂಜಗಿ ಇದ್ದರು.
ಪ್ರಜಾವಾಣಿ ಸುದ್ದಿ ಓದಿದ ತಕ್ಷಣವೇ ಪಟ್ಟಣ ಪಂಚಾಯತಿ ಅಧಿಕಾರಿ ಜೊತೆ ಮಾತನಾಡಿ ಗ್ರಾಮಸ್ಥರ ಸಹಕಾರದೊಂದಿಗೆ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಸೂಚಿಸಿದ್ದೇನೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು
–ಎಂ.ಬಿ.ಪಾಟೀಲ, ಶಾಸಕ, ಬಬಲೇಶ್ವರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.