ಯಾದಗಿರಿ:ಲಾಕ್ ಡೌನ್ ಜಾರಿಯಾದ್ದರಿಂದ ಜನರು ತಿರುಗಾಡುವುದು ನಿಂತಿದೆ. ಇದರಿಂದಾಗಿ ರೈತರು ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವಿಸುವಂತಾಗಿದ್ದು, ಇಂಥ ಸಂದಿಗ್ಧ ಸಮಯದಲ್ಲಿ ಎಲ್ಲರೂ ರೈತರಿಗೆ ನೆರವು ನೀಡುವ ಮೂಲಕ ಅವರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಮನವಿ ಮಾಡಿದರು.
ಶುಕ್ರವಾರ ತಾಲ್ಲೂಕಿನ ಬಳಿಚಕ್ರ ಗ್ರಾಮದ ರೈತ ಮಹೇಂದ್ರ ಪೂಜಾರಿ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಖರೀದಿಸಿದ ಅವರು, ರೈತರು ಎಕರೆಗೆ ಸುಮಾರು ₹20 ಸಾವಿರದಷ್ಟು ಖರ್ಚು ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಇಲ್ಲದಿದ್ದರೆ ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿ ಸುಮಾರು ₹1 ಲಕ್ಷ ಆದಾಯ ಗಳಿಸುತ್ತಿದ್ದರು ಎಂದರು.
ಜಾತ್ರೆ, ಕಾರ್ಯಕ್ರಮ, ಸಭೆಗಳೆಲ್ಲವೂ ನಿಂತು ಹೋಗಿವೆ, ಮಾರುಕಟ್ಟೆ ಇಳಿಮುಖವಾಗಿದೆ. ಇದರಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ರೈತನ ಕೈಹಿಡಿದು ಧೈರ್ಯ ತುಂಬುವ ಕೆಲಸ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಮಲ್ಲಣ್ಣಗೌಡ ಕೌಳೂರು, ಬಂದಪ್ಪಗೌಡ ಲಿಂಗೇರಿ, ಸಕ್ರೆಪ್ಪಗೌಡ ಬಳಿಚಕ್ರ, ನರಸಪ್ಪ ನಂದವಾರ, ಶಿವುಗೌಡ ಕೌಳೂರು, ಬೆಂಜಮಿನ್, ಭರತ ಕಲಾಲ್ ಹಣ್ಣುಗಳನ್ನು ಖರೀದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.